ADVERTISEMENT

ನಮ್ಮದು ಪ್ರಜ್ಞಾಪೂರ್ವಕ ನಿರ್ಧಾರ- ಕೃಷ್ಣ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ನ್ಯೂಯಾರ್ಕ್ (ಪಿಟಿಐ): ಪಾಕಿಸ್ತಾನದೊಂದಿಗೆ ಬಾಕಿ ಉಳಿದಿರುವ ಎಲ್ಲ ವಿಷಯಗಳ ಕುರಿತು ಮಾತುಕತೆ ಪುನರಾರಂಭಿಸುವ ಭಾರತದ ನಿಲುವು ಒಂದು ‘ಪ್ರಜ್ಞಾಪೂರ್ವಕ ನಿರ್ಧಾರ’ವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಶುಕ್ರವಾರ ಇಲ್ಲಿ ತಿಳಿಸಿದರು.ಭಾರತವು ವಿಶ್ವಸಂಸ್ಥೆಯ ಕಾಯಂ ಅಲ್ಲದ (ಹಂಗಾಮಿ) ಸದಸ್ಯ ರಾಷ್ಟ್ರವಾಗಿ ಆಯ್ಕೆಯಾದ ನಂತರ ಇಲ್ಲಿಗೆ ಮೊದಲ ಭೇಟಿ ನೀಡಿರುವ ಅವರು ಸುದ್ದಿಸಂಸ್ಥೆ ಜೊತೆ ಮಾತನಾಡಿ, ‘ಉಭಯ ದೇಶಗಳು ನೆರೆಯ ಆಫ್ಘಾನಿಸ್ತಾನ ಸಮಸ್ಯೆಯನ್ನು ಚರ್ಚಿಸುವುದು ಸಹ ಅವಶ್ಯಕವಾಗಿದೆ’ ಎಂದು ಹೇಳಿದರು.

‘ಎರಡೂ ದೇಶಗಳ ನಡುವಿನ ಎಲ್ಲ ಬಾಕಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ಮಾತುಕತೆಯನ್ನು ಪುನರಾರಂಭಿಸಿರುವುದು ಒಂದು ಪ್ರಜ್ಞಾಪೂರ್ವಕ ತೀರ್ಮಾನ’ ಎಂದು ಅವರು ನುಡಿದರು.‘ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯು ಯೋಗ್ಯ ಮಾರ್ಗದಲ್ಲಿ ಸಾಗಿದ್ದು, ಇದು ವಿದೇಶಾಂಗ ಸಚಿವರ ನಡುವಿನ ಸಮಾಲೋಚನೆಗೆ ಹಾದಿ ಸುಗಮ ಮಾಡಿಕೊಟ್ಟಿದೆ’ ಎಂದೂ ಅಭಿಪ್ರಾಯಪಟ್ಟರು.‘ಮುಂಬೈ ಮೇಲಿನ ಉಗ್ರರ ದಾಳಿ ನಂತರ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಈಗ ಏಕೆ ಪುನರಾರಂಭ ಮಾಡಲಾಯಿತು’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಪಾಕ್ ಸರ್ಕಾರ ಸೂಕ್ತ ಕ್ರಮ ಜರುಗಿಸುವುದೆಂಬ ವಿಶ್ವಾಸವನ್ನು ಭಾರತ ಹೊಂದಿರುವುದಾಗಿ ತಿಳಿಸಿದರು.

ಭದ್ರತಾ ಮಂಡಳಿ ವಿಸ್ತರಣೆ ಅನಿವಾರ್ಯ

ವಿಶ್ವಸಂಸ್ಥೆ (ಪಿಟಿಐ): ತುರ್ತಾಗಿ ವಿಶ್ವಸಂಸ್ಥೆಯಲ್ಲಿನ ಭದ್ರತಾ ಮಂಡಳಿಯನ್ನು ಸುಧಾರಣೆ ಮಾಡಬೇಕೆಂಬ ಬೇಡಿಕೆಗೆ ಪೂರಕವಾಗಿ ಶುಕ್ರವಾರ ಇಲ್ಲಿ ಪ್ರತಿಕ್ರಿಯಿಸಿದ ಭಾರತವು, ಬಹುಕಾಲದಿಂದ ನೆನೆಗುದಿಯಲ್ಲಿರುವ ಮಂಡಳಿಯ ‘ವಿಸ್ತರಣೆ ಅನಿವಾರ್ಯ’ವಾದುದು ಎಂದು ತಿಳಿಸಿದೆ.ಈ ಸಂಬಂಧ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕ, ಕೆರಿಬಿಯನ್ ಹಾಗೂ ಪೆಸಿಫಿಕ್ ದೇಶಗಳ ಒಕ್ಕೂಟವಾದ ಎಲ್-69 ಗುಂಪಿನೊಂದಿಗೆ ಸಮಾಲೋಚಿಸಿದ ಬಳಿಕ ಸುದ್ದಿ ಸಂಸ್ಥೆ ಜೊತೆ ಮಾತನಾಡಿ, ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.‘ಇದೊಂದು ತುರ್ತು ಅವಶ್ಯಕತೆಯಾಗಿದ್ದು ಇದನ್ನು ಎಲ್ಲ ರಾಷ್ಟ್ರಗಳು ಸರ್ವಾನುಮತದಿಂದ ಹೃದಯ ಪೂರ್ವಕವಾಗಿ ಬೆಂಬಲಿಸಬೇಕಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.