ಸ್ಟಾವ್ಯಾಂಗರ್ (ನಾರ್ವೆ) (ಪಿಟಿಐ): ಭಾರತದ ರಾಯಭಾರ ಕಚೇರಿಯ ನಿರಂತರ ಒತ್ತಡದ ಪರಿಣಾಮವಾಗಿ ಕಳೆದ ವರ್ಷದಿಂದ ಇಲ್ಲಿನ ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಅನಿವಾಸಿ ಭಾರತೀಯ ದಂಪತಿಯ ಇಬ್ಬರು ಮಕ್ಕಳನ್ನು ಅವರ ಚಿಕ್ಕಪ್ಪನ ಸುಪರ್ದಿಗೆ ವಹಿಸುವಂತೆ ನಾರ್ವೆಯ ಸ್ಟಾವ್ಯಾಂಗರ್ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಭಾವನಾತ್ಮಕ ಸಂಬಂಧಗಳಿಂದಾಗಿ ಅಭಿಜ್ಞಾನ (3) ಹಾಗೂ ಐಶ್ವರ್ಯ (1) ಅವರನ್ನು ಚಿಕ್ಕಪ್ಪನಾದ ಅರುಣಾಭಾಷ ಭಟ್ಟಾಚಾರ್ಯ ಬೆಳೆಸಿದ್ದರು. ಈ ಮಕ್ಕಳ ಕುರಿತು ತಾಯಿ- ತಂದೆಯರ ನಿರ್ಲಕ್ಷವೇ ತಾನು ಮಕ್ಕಳನ್ನು ಪಡೆದು ಬೆಳೆಸಲು ಕಾರಣ ಎಂದು ಚಿಕ್ಕಪ್ಪ ತಿಳಿಸಿದ್ದ. ನಂತರ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಪಾಲನಾ ಕೇಂದ್ರದ ವಶಕ್ಕೆ ಒಪ್ಪಿಸಲಾಗಿತ್ತು. ಪಾಲಕರಿಂದ ಬೇರ್ಪಡಿಸಲಾದ ಈ ಮಕ್ಕಳನ್ನು ಚಿಕ್ಕಪ್ಪ ಚೆನ್ನಾಗಿ ನೋಡಿಕೊಳ್ಳಬೇಕು, ಮಕ್ಕಳನ್ನು ಅವರ ಸ್ವದೇಶವಾದ ಭಾರತಕ್ಕೆ ಕಳುಹಿಸಿಕೊಡಲು ಅಗತ್ಯ ಸಿದ್ಧತೆ ಮಾಡಬೇಕು ಎಂದು ಸೂಚಿಸಲಾಗಿದೆ.
ಮಕ್ಕಳ ಬಿಡುಗಡೆಗಾಗಿ ಚಿಕ್ಕಪ್ಪ ಹಾಗೂ ನಾರ್ವೆಯ ಮಕ್ಕಳ ಪಾಲಕರು ಹಾಗೂ ಮಕ್ಕಳ ಕಲ್ಯಾಣ ಸೇವೆ (ಸಿಡಬ್ಲ್ಯೂಎಸ್) ವತಿಯಿಂದ ಜಂಟಿಯಾಗಿ ಕೋರ್ಟ್ಗೆ ಮನವಿ ಮಾಡಿಕೊಳ್ಳಲಾಗಿತ್ತು. ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ಮಕ್ಕಳ ಬಿಡುಗಡೆಗೆ ಆದೇಶ ನೀಡಿದೆ.
ಕೋರ್ಟ್ ಆದೇಶ ಸಂಬಂಧ ಪ್ರತಿಕ್ರಿಯಿಸಿರುವ ಮಕ್ಕಳ ತಂದೆ ಅನುರೂಪ್, ಒಂದು ವರ್ಷದ ನೋವಿಗೆ ಈಗ ಮುಕ್ತಿ ಸಿಕ್ಕಂತಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.