
ಢಾಕಾ: ಬಾಂಗ್ಲಾದೇಶದ ಜಮಾಲ್ಪುರ್ ಜಿಲ್ಲೆಯಿಂದ ಪ್ರವಾಹದಲ್ಲಿ ಕೊಚ್ಚಿ ಹೋದ ಆನೆ ಢಾಕಾದಲ್ಲಿ ದಡ ಸೇರಿತ್ತು. ಸರಿ ಸುಮಾರು 1,700 ಕಿ.ಮೀ ದೂರ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಈ ಆನೆಯ ಜೀವ ಉಳಿಸಲು ಪ್ರಯತ್ನಿಸಿದ್ದರೂ ಅದು ಯಶಸ್ವಿಯಾಗಲಿಲ್ಲ.
ಜೂನ್ ತಿಂಗಳಾಂತ್ಯದಲ್ಲಿ ನೆರೆ ಬಂದಾಗ ಆ ನೆರೆ ನೀರಿನಲ್ಲಿ ಆನೆ (ಭಾರತದ ಆನೆ ಪ್ರಭೇದಕ್ಕೆ ಸೇರಿದ್ದು) ಕೊಚ್ಚಿ ಹೋಗಿ ಢಾಕಾದಲ್ಲಿ ದಡ ಸೇರಿತ್ತು. ಅಲ್ಲಿ ಆನೆಯನ್ನು ರಕ್ಷಿಸಿದ ಜನರು ಅದನ್ನು ಅಲ್ಲಿನ ಸಫಾರಿ ಪಾರ್ಕ್ ಗೆ ಕೊಂಡೊಯ್ದು ಶುಶ್ರೂಷೆ ನೀಡಿದ್ದರು. ಆದರೆ ಸಿಕ್ಕಾಪಟ್ಟೆ ಕ್ಷೀಣಿಸಿಕೊಂಡಿದ್ದ ಆನೆಗೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ.
ಕಳೆದ 48 ದಿನಗಳಿಂದ ಅರಣ್ಯ ಇಲಾಖೆಯ 10 ಸಿಬಂದಿ, ಪಶುವೈದ್ಯರು ಮತ್ತು ಪೊಲೀಸರು ಆನೆಯ ಶುಶ್ರೂಷೆಯಲ್ಲಿ ತೊಡಗಿದ್ದರು. ಆನೆಯ ಜೀವ ಉಳಿಸಲು ಶತಾಯಗತಾಯ ಯತ್ನಿಸಿದ್ದರೂ ಮಂಗಳವಾರ ಬೆಳಗ್ಗೆ 7 ಗಂಟೆಗೆ ಅದು ಮೃತ ಪಟ್ಟಿದೆ ಎಂದು ವನ್ಯಜೀವಿ ಸಂರಕ್ಷಣಾ ಅಧಿಕಾರಿ ಅಶಿತ್ ರಂಜನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.