ADVERTISEMENT

ಬ್ಯಾಂಕಾಕ್: ಪ್ರವಾಹ ತಡೆಯಲು ಹರಸಾಹಸ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಬ್ಯಾಂಕಾಕ್ (ಎಎಫ್‌ಪಿ): ಥಾಯ್ಲೆಂಡ್‌ನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಈಗ ನೆರೆ ನೀರು ಬ್ಯಾಂಕಾಕ್‌ನತ್ತ ಹರಿಯುತ್ತಿದೆ.

ರಾಜಧಾನಿ ನಗರದಲ್ಲಿ ನೆಲೆಸಿರುವ  1.2 ಕೋಟಿ ಜನರನ್ನು ಪ್ರವಾಹದಿಂದ ರಕ್ಷಿಸಲು ಸರ್ಕಾರ ಹರ ಸಾಹಸ ನಡೆಸಿದೆ. ಇದರಲ್ಲಿ ಅಲ್ಪ ಮಟ್ಟಿನ ಯಶಸ್ಸನ್ನೂ ಪಡೆದಿದೆ.

ಬ್ಯಾಂಕಾಕ್‌ನ ಒಳಪ್ರದೇಶಗಳಿಗೆ ನೀರು ನುಗ್ಗಿರುವ ಬಗ್ಗೆ ಇದುವರೆಗೆ ಯಾವುದೇ ವರದಿಯಾಗಿಲ್ಲ.
`ನಮ್ಮ ಆರ್ಥಿಕ ವಲಯಗಳಾದ ಬ್ಯಾಂಕಾಕ್, ಸುವರ್ಣಭೂಮಿ ವಿಮಾನನಿಲ್ದಾಣ, ಕೈಗಾರಿಕಾ ಪ್ರದೇಶ, ಸ್ಥಳಾಂತರ ಕೇಂದ್ರಗಳನ್ನು ರಕ್ಷಿಸಲು  ಶ್ರಮಮೀರಿ ಯತ್ನಿಸುತ್ತೇವೆ~ ಎಂದು ಪ್ರಧಾನಿ ಯಿಂಗ್ಲುಕ್ ಶಿನವಾತ್ರಾ ಹೇಳಿದ್ದಾರೆ.

ನದಿ ದಂಡೆ, ಕಾಲುವೆಗಳ ಬದಿಗಳಲ್ಲಿ ಮರಳು ಚೀಲಗಳನ್ನು ರಾಶಿ ಹಾಕಲಾಗಿದೆ. ಅ.13ರಂದು ಒಡೆದು ಹೋಗಿದ್ದ ಕಂದಕವನ್ನು ದುರಸ್ತಿಗೊಳಿಸಲಾಗುತ್ತಿದೆ.

ನೆರೆಯಿಂದಾಗಿ ಥಾಯ್ಲೆಂಡ್‌ನಲ್ಲಿ ಇದುವರೆಗೆ 297 ಜನರು ಮೃತಪಟ್ಟಿದ್ದಾರೆ. ರಾಷ್ಟ್ರದ ಮೂರನೇ ಒಂದು ಭಾಗ ಪ್ರವಾಹ ಪೀಡಿತವಾಗಿದೆ. ಸಾವಿರಾರು ಮನೆಗಳಿಗೆ ಹಾನಿಯಾಗಿದೆ. 1.10 ಲಕ್ಷ ಜನರು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.