ಲಂಡನ್ (ಪಿಟಿಐ): ಭಾರತದಲ್ಲಿ ಆಹಾರ ಭದ್ರತಾ ಮಸೂದೆ ಜಾರಿಗೊಳಿಸುವ ಜತೆಗೆ ಪೌಷ್ಟಿಕ ಆಹಾರ ಪೂರೈಕೆಗಾಗಿ ಬಜೆಟ್ನಲ್ಲಿ ಹೆಚ್ಚು ಹಣ ನಿಗದಿಗೊಳಿಸಬೇಕು ಎಂದು ಬ್ರಿಟನ್ನಿನ ಪ್ರಮುಖ ದತ್ತಿನಿಧಿ ಸಂಸ್ಥೆಯೊಂದು ಒತ್ತಾಯಿಸಿದೆ.
ಮಕ್ಕಳ ಅಪೌಷ್ಟಿಕತೆಯು ರಾಷ್ಟ್ರೀಯ ಅಪಮಾನ ಎಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಕೆಲವು ದಿನಗಳ ಹಿಂದೆ ಹೇಳಿದ್ದು ಇನ್ನೂ ನೆನಪಿನಲ್ಲಿ ಇರುವಾಗಲೇ `ದಿ ಸೇವ್~ ಸಂಸ್ಥೆ ಹೀಗೆ ಹೇಳಿದೆ.
ಜಗತ್ತಿನಲ್ಲಿರುವ ಒಟ್ಟು ಅಪೌಷ್ಟಿಕ ಮಕ್ಕಳಲ್ಲಿ ಶೇ 50ರಷ್ಟು ಅಪೌಷ್ಟಿಕ ಮಕ್ಕಳು ಭಾರತ, ಬಾಂಗ್ಲಾದೇಶ, ಪೆರು, ಪಾಕಿಸ್ತಾನ ಮತ್ತು ನೈಜೀರಿಯಾಗಳಲ್ಲಿ ಇದ್ದಾರೆ ಎಂದೂ ಸಂಸ್ಥೆ ತಿಳಿಸಿದೆ.
ಹಸಿವು ಮತ್ತು ಅಪೌಷ್ಟಿಕತೆಯನ್ನು ನೀಗಲು ಬ್ರಿಟನ್ ಗಮನ ಕೇಂದ್ರೀಕರಿಸಿದ್ದು, ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಬೇರೆ ರಾಷ್ಟ್ರಗಳು ಕೂಡ ಇದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಅಭಿವೃದ್ಧಿ ಕಾರ್ಯದರ್ಶಿ ಆಂಡ್ರ್ಯೂ ಮಿಷೆಲ್ ಆಶಿಸಿದ್ದಾರೆ.
ಭಾರತದಲ್ಲಿನ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಲಿಂಗ ತಾರತಮ್ಯ, ಲಂಚಕೋರತನ, ಯೋಜನೆಗಳ ಅನುಷ್ಠಾನದಲ್ಲಾಗುವ ಲೋಪ ಇತ್ಯಾದಿಗಳ ಕುರಿತೂ ಸಂಸ್ಥೆ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.
ಹಸಿವು ಹಾಗೂ ಅಪೌಷ್ಟಿಕತೆ ನಿರ್ಮೂಲನೆಗೆ ಸಂಬಂಧಿಸಿದಂತೆ ಅಡೆತಡೆಗಳನ್ನು ನಿವಾರಿಸುವಂತಹ ನೀತಿಯನ್ನು ಭಾರತ ಹೊಂದಿಲ್ಲ ಎಂದೂ ಸಂಸ್ಥೆ ವರದಿಯಲ್ಲಿ ದಾಖಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.