ಕೊಲಂಬೊ (ಪಿಟಿಐ): ತಮಿಳುನಾಡಿನ ರಾಜಕೀಯ ಪಕ್ಷಗಳ ವಿರೋಧದ ಹೊರತಾಗಿಯೂ ತನ್ನ ರಕ್ಷಣಾ ಸಿಬ್ಬಂದಿಯನ್ನು ತರಬೇತಿಗಾಗಿ ಭಾರತಕ್ಕೆ ಕಳುಹಿಸುವುದನ್ನು ಮುಂದುವರಿಸುವುದಾಗಿ ಶ್ರೀಲಂಕಾ ಬುಧವಾರ ಸ್ಪಷ್ಟಪಡಿಸಿದೆ.
ಚೀನಾ ಅಥವಾ ಬೇರ್ಯಾವುದೇ ರಾಷ್ಟ್ರಕ್ಕೆ ತನ್ನ ರಕ್ಷಣಾ ಸಿಬ್ಬಂದಿಯನ್ನು ತರಬೇತಿಗಾಗಿ ಕಳುಹಿಸುವುದಿಲ್ಲ ಎಂದೂ ಇದೇ ವೇಳೆ ಅದು ಹೇಳಿದೆ.
ರಾಷ್ಟ್ರಾಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಸೋದರ, ಪ್ರಭಾವಿ ನಾಯಕ ಹಾಗೂ ಆರ್ಥಿಕ ಅಭಿವೃದ್ಧಿ ಸಚಿವರಾದ ಬೆಸಿಲ್ ರಾಜಪಕ್ಸೆ ಅವರು ಇಲ್ಲಿಗೆ ಭೇಟಿ ನೀಡಿರುವ ಭಾರತದ ಪತ್ರಕರ್ತರೊಂದಿಗೆ ನಡೆಸಿದ ಸಂವಾದದ ವೇಳೆ ಹೀಗೆ ಹೇಳಿದರು.
ಶ್ರೀಲಂಕಾವು ಭಾರತವನ್ನು ಚೀನಾಕ್ಕಿಂತ ಮಹಾನ್ ರಾಷ್ಟ್ರವೆಂದು ಭಾವಿಸುತ್ತದೆ ಎಂದೂ ಬೆಸಿಲ್ ನುಡಿದರು. ಇತ್ತೀಚೆಗೆ ತಮಿಳುನಾಡಿನಲ್ಲಿ ಶ್ರೀಲಂಕಾದ ಪ್ರಜೆಗಳ ಮೇಲೆ ನಡೆದ ದಾಳಿ ಪ್ರಕರಣಗಳಿಂದ ಘಾಸಿಯಾಗಿರುವುದು ನಿಜ. ಆದರೆ, ಇದರಿಂದಾಗಿ ತಮ್ಮ ರಾಷ್ಟ್ರದಲ್ಲಿ ಯಾರಿಗೂ ಭಾರತದ ಬಗ್ಗೆಯಾಗಲೀ ಅಥವಾ ಭಾರತೀಯರೆಡೆಗಾಗಲೀ ಕಹಿ ಭಾವನೆ ಮೂಡಿಲ್ಲ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.