ADVERTISEMENT

ಭಾರತದ ಪರಮಾಣು ಸ್ಥಾವರಗಳಿಂದ ವಿಕಿರಣದ ಅಪಾಯ: ಶ್ರೀಲಂಕಾ ತೀವ್ರ ಕಳವಳ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ಕೊಲಂಬೊ (ಪಿಟಿಐ): ಭಾರತದ ದಕ್ಷಿಣ ಭಾಗದಲ್ಲಿರುವ ಪರಮಾಣು ಸ್ಥಾವರಗಳಿಂದ ಉಂಟಾಗಬಹುದಾದ ವಿಕಿರಣದ ಅಪಾಯದ ಬಗ್ಗೆ ಶ್ರೀಲಂಕಾ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದನ್ನು ಜಾಗತಿಕ ಪರಮಾಣು ಕಾವಲು ಸಂಸ್ಥೆ (ಐಎಇಎ) ಮುಂದೆ ಪ್ರಸ್ತಾಪಿಸಲು ಮುಂದಾಗಿದೆ.

ಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಸಭೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಸ್ತಾಪಿಸಲಾಗುವುದು ಎಂದು ವಿದ್ಯುತ್ ಮತ್ತು ಇಂಧನ ಖಾತೆ ಸಚಿವ ಚಂಪಿಕಾ ರನಾವಕಾ ತಿಳಿಸಿದ್ದಾರೆ.

`ಪರಮಾಣು ಸ್ಥಾವರ ಹೊಂದುವುದು ಭಾರತದ ಹಕ್ಕು. ಇದನ್ನು ನಾವು ಗೌರವಿಸುತ್ತೇವೆ. ಆದರೆ, ನಮ್ಮ ಚಿಂತೆ ಇರುವುದು ವಿಕಿರಣಗಳಿಂದ ಉಂಟಾಗಬಹುದಾದ ಗಂಭೀರ ಪರಿಣಾಮದ ಬಗ್ಗೆ. ಹಾಗಾಗಿ ಈ ಕುರಿತು ಈಗಾಗಲೇ ಪತ್ರ ಬರೆಯಲಾಗಿದೆ~ ಎಂದು ಹೇಳಿದ್ದಾರೆ.

ಚೆರ್ನೊಬಿಲ್ ಮತ್ತು ಫುಕುಶಿಮಾದಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ನಮಗೆ ಈ ಕಳವಳ ಉಂಟಾಗಿದೆ. ನಾವು ಪರಮಾಣು ಸುರಕ್ಷೆಗಾಗಿ ಕಾರ್ಯ ನಿರ್ವಹಿಸಲಿದ್ದೇವೆ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ವಿಷಯದ ಕುರಿತು ಎರಡು ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಡಬೇಕು ಎಂದು ಐಎಇಎ ತಿಳಿಸಿತ್ತು.

ವಿದೇಶಾಂಗ ಸಚಿವಾಲಯದ ಮುಖೇನ ಭಾರತಕ್ಕೆ ಈ ಪ್ರಸ್ತಾವ ಕಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮೂರು ಅಣು ಸ್ಥಾವರಗಳು ತಮಿಳುನಾಡಿನ ದಕ್ಷಿಣ ಕರಾವಳಿಯಲ್ಲಿದ್ದು, ದ್ವೀಪ ರಾಷ್ಟ್ರದಿಂದ ತುಂಬ ಸನಿಹದಲ್ಲಿವೆ.
ಕೂಡುಂಕುಳಂ ಅಣು ಸ್ಥಾವರ ಲಂಕಾದ ಮನ್ನಾರ ಕರಾವಳಿಯಿಂದ 250 ಕಿ.ಮೀ ದೂರದಲ್ಲಿದೆ. ಅಣು ಸ್ಥಾವರದಿಂದ ಯಾವುದೇ ರೀತಿಯ ದುರಂತ ಸಂಭವಿಸಿದರೆ ಅದನ್ನು ಎದುರಿಸುವ ಸೂಕ್ತ ವ್ಯವಸ್ಥೆಯನ್ನು ಶ್ರೀಲಂಕಾದ ಹೊಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.