
ವಾಷಿಂಗ್ಟನ್ (ಪಿಟಿಐ): ಹಿಂದೂ ಧರ್ಮದ ಬಗ್ಗೆ ತಾವು ಬರೆದ ಕೃತಿಯ ಎಲ್ಲ ಪ್ರತಿಗಳನ್ನು ಪೆಂಗ್ವಿನ್ ಪ್ರಕಾಶ ಸಂಸ್ಥೆಯು ವಾಪಸ್ ಪಡೆಯಲು ಕಾರಣವಾದ ಬೆಳವಣಿಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಲೇಖಕಿ ವೆಂಡಿ ಡೊನಿಗರ್, ‘ಭಾರತದ ಕಾನೂನು ನೀಚತನದಿಂದ ಕೂಡಿದೆ’ ಎಂದು ಟೀಕಿಸಿದ್ದಾರೆ.
‘ದಿ ಹಿಂದೂಸ್: ಆ್ಯನ್ ಆಲ್ಟರ್ನೇಟಿವ್ ಹಿಸ್ಟರಿ’ ಪುಸ್ತಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿ ದೆಹಲಿ ಕೋರ್ಟ್ಗೆ ದೂರು ಸಲ್ಲಿಸಲಾಗಿತ್ತು. ದೂರುದಾರರ ಜತೆ ಕೋರ್ಟ್ ಹೊರಗೆ ನಡೆದ ಒಪ್ಪಂದದ ಪ್ರಕಾರ ಪೆಂಗ್ವಿನ್ ಸಂಸ್ಥೆಯು ಈ ಕೃತಿಯ ಎಲ್ಲ ಪ್ರತಿಗಳನ್ನು ವಾಪಸ್ ಪಡೆಯಲು ಮುಂದಾಗಿದೆ.
‘ಈ ಬೆಳವಣಿಗೆಯಿಂದ ನನಗೆ ನೋವಾಗಿದೆ. ಭಾರತದಲ್ಲಿ ಮುಕ್ತ ಅಭಿವ್ಯಕ್ತಿಗೆ ಅವಕಾಶವಿಲ್ಲದ ಕೆಟ್ಟ ಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ’ ಎಂದು ವೆಂಡಿ ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
‘ಇದು ಇಂಟರ್ನೆಟ್ ಯುಗ. ಹಾಗಾಗಿ ಯಾರೂ ಪುಸ್ತಕವೊಂದನ್ನು ಬಹಿಷ್ಕರಿಸಲು ಸಾಧ್ಯವಿಲ್ಲ. ನನ್ನ ಕೃತಿಯನ್ನು ಇ–ಪುಸ್ತಕದಲ್ಲಿ ಓದಬಹುದು’ ಎಂದು ಅವರು ಹೇಳಿದ್ದಾರೆ. ವೆಂಡಿ ಅವರು ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಧಾರ್ಮಿಕ ಇತಿಹಾಸ ಪ್ರಾಧ್ಯಾಪಕಿಯಾಗಿದ್ದಾರೆ. ‘ರಾಮಾಯಣ ಕಲ್ಪಿತ ಕಥೆ’ ಎಂದು ವೆಂಡಿ ತಮ್ಮ ಕೃತಿಯಲ್ಲಿ ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.