ADVERTISEMENT

ಮಾಲ್ಡೀವ್ಸ್ ಸರ್ಕಾರದಲ್ಲಿ ಭಾಗಿ: ಪದಚ್ಯುತ ಅಧ್ಯಕ್ಷರಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಮಾಲೆ (ಪಿಟಿಐ): ರಾಷ್ಟ್ರದಲ್ಲಿ ಚುನಾವಣೆ ನಿಗದಿಯಾಗಿದ್ದಂತೆ 2013ರಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿರುವ ರಾಷ್ಟ್ರದ ನೂತನ ಅಧ್ಯಕ್ಷ ಮೊಹಮ್ಮದ್ ವಹೀದ್ ಹಸನ್, ಪದಚ್ಯುತ ಅಧ್ಯಕ್ಷ  ಮೊಹಮ್ಮದ್ ನಶೀದ್ ನೇತೃತ್ವದ ಎಂಡಿಪಿ ಪಕ್ಷವನ್ನು ಸರ್ಕಾರದಲ್ಲಿ ಭಾಗಿಯಾಗಲು ಆಹ್ವಾನಿಸಿದ್ದಾರೆ. ಆದರೆ ಎಂಡಿಪಿ ಇದನ್ನು ತಿರಸ್ಕರಿಸಿದ್ದು, ತಕ್ಷಣವೇ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದೆ.

ರಚನೆಯಾಗಲಿರುವ ನೂತನ ರಾಷ್ಟ್ರೀಯ ಏಕತಾ ಸರ್ಕಾರದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿ ವಹೀದ್ ಹಸನ್ ಎಂಡಿಪಿಗೆ ಪತ್ರ ಬರೆದಿದ್ದು, ಫೆ.20ಕ್ಕೆ ಮುನ್ನ ಈ ಕುರಿತು ಅಭಿಪ್ರಾಯ ತಿಳಿಸುವಂತೆ ಗಡುವು ನೀಡಿದ್ದಾರೆ.

ದ್ವೀಪರಾಷ್ಟ್ರದಲ್ಲಿನ ಹಠಾತ್ ಬೆಳವಣಿಗೆಗಳ ಕುರಿತು ಭಾರತದ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಅವರು ಇಲ್ಲಿನ ಪ್ರಮುಖರೊಂದಿಗೆ ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲೇ ವಹೀದ್ ಹೀಗೆ ಪತ್ರ ಬರೆದಿರುವುದು ಕುತೂಹಲ ಹುಟ್ಟಿಸಿದೆ.

ಈ ಮಧ್ಯೆ, ರಾಷ್ಟ್ರದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಭಾರತ ತಳೆದ ಧೋರಣೆಗೆ ಬುಧವಾರವಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದ ಪದಚ್ಯುತ ಅಧ್ಯಕ್ಷ ನಶೀದ್, ಇದೀಗ ವರಸೆ ಬದಲಿಸಿ, ಭಾರತದ ಧೋರಣೆಯಿಂದ ತಮಗೆ ನಿರೀಕ್ಷೆಗೂ ಮೀರಿದ ಸಮಾಧಾನವಾಗಿದೆ ಎಂದಿದ್ದಾರೆ.

ಇಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ರಂಜನ್ ಮಥಾಯ್ ಅವರು ತಮ್ಮಂದಿಗೆ ಒಂದು ಗಂಟೆ ಕಾಲ ಮಾತುಕತೆ ನಡೆಸಿದ ನಂತರ ನಶೀದ್ ಹೀಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.