ADVERTISEMENT

ಮುಳುಗಿದ ಹಡಗು: 6 ಭಾರತೀಯರ ಸಾವು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ದುಬೈ (ಪಿಟಿಐ): ಪರ್ಶಿಯನ್ ಕೊಲ್ಲಿಯಲ್ಲಿ ಮುಳುಗಿದ ಸಣ್ಣ ಹಡಗಿನಲ್ಲಿದ್ದ ಆರು ಮಂದಿ ಭಾರತೀಯ ಮುಳುಗು ತಜ್ಞರು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ.

ಹಾಗಾಗಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯಾಗಿದೆ. ಸಮುದ್ರಕ್ಕೆ ಜಿಗಿಯುವ ಛೇಂಬರ್‌ನಲ್ಲಿ ಎಲ್ಲಾ ಆರು ಮಂದಿ ಭಾರತೀಯರ ಶವ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಪರ್ಶಿಯಾ ಕೊಲ್ಲಿಯಲ್ಲಿ ಗುರುವಾರ ಮುಳುಗಿದ್ದ ಸಣ್ಣ ಹಡಗಿನಲ್ಲಿ ಈ ಮುಳುಗು ತಜ್ಞರು ಇದ್ದರು.

ಜತೆಗೆ ಇರಾನಿನ ರಕ್ಷಣಾ ತಂಡದವರೂ  ಸಮುದ್ರಕ್ಕೆ ಇಳಿದಿದ್ದು, ಅವರ ಪರಿಸ್ಥಿತಿ ಏನಾಗಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಈ ನಡುವೆ, ಮುಳುಗಿರುವ ಹಡಗಿನ ಏಳು ಮಂದಿ ನಾವಿಕರ ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. ಹಡಗಿನಲ್ಲಿ ಒಟ್ಟು 73 ಪ್ರಯಾಣಿಕರಿದ್ದು, ಈ ಪೈಕಿ 60 ಮಂದಿಯನ್ನು ರಕ್ಷಿಸಲಾಗಿದೆ. ಆರು ಮಂದಿ ಮೃತಪಟ್ಟಿದ್ದಾರೆ. ಉಳಿದ ಏಳು ಮಂದಿ ನಾವಿಕರ ರಕ್ಷಣೆಗೆ ಪ್ರಯತ್ನ ಮುಂದುವರೆದಿದೆ ಎಂದು ಬುಷೇರ್ ಪ್ರಾಂತ್ಯದ ಬಂದರು ಮತ್ತು ಸಮುದ್ರ ಸಂಸ್ಥೆಯ ಮಹಾನಿರ್ದೇಶಕ ಮೊಹ್ಮದ್ ರಸ್ತಾದ್ ತಿಳಿಸಿದ್ದಾರೆ.

ಶನಿವಾರ ಇಡೀ ದಿನ ರಕ್ಷಣಾ ತಂಡದವರು ಶೋಧ ಕಾರ್ಯ ನಡೆಸಿದ್ದು, ಭಾನುವಾರ ಬೆಳಿಗ್ಗೆ ಸಮುದ್ರದ 73 ಮೀಟರ್ ಆಳದಲ್ಲಿ ಆರು ಮಂದಿಯ ಶವ ಪತ್ತೆಯಾಗಿದೆ. ಹಡಗಿನಲ್ಲಿದ್ದ ಒಟ್ಟು 13 ಮಂದಿ ನಾವಿಕರ ಪೈಕಿ ಎಂಟು ಜನರು ವಿದೇಶಿಯರಾಗಿದ್ದಾರೆ. ಹಡಗು ಮುಳುಗಲು ಅದರಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೈಲ ತುಂಬಿದ್ದೇ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.