ADVERTISEMENT

ಮೋದಿ ಶಾಂತಿ ಮಾತುಕತೆ ಪರ ಇಲ್ಲ: ಪರ್ವೇಜ್‌ ಮುಷರಫ್‌

ಪಿಟಿಐ
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಮುಷರಫ್‌
ಮುಷರಫ್‌   

ಇಸ್ಲಾಮಾಬಾದ್: ‘ಭಾರತ ಮತ್ತು ಪಾಕಿಸ್ತಾನ ಶಾಂತಿ ಮತ್ತು ಸಾಮರಸ್ಯದ ಹಾದಿಯಲ್ಲಿದ್ದರೂ, ಪ್ರಧಾನಿ ನರೇಂದ್ರ ಮೋದಿ ಶಾಂತಿ ಮಾತುಕತೆಯ ಪರ ಇಲ್ಲ’ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಆರೋಪಿಸಿದ್ದಾರೆ.

‘ನಾನು ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಿಪೇಯಿ ಮತ್ತು ಮನಮೋಹನ ಸಿಂಗ್‌ ಜೊತೆ ಮಾತುಕತೆ ನಡೆಸಿದ್ದೆ. ಸಿಯಾಚಿನ್ ಮತ್ತು ಕಾಶ್ಮೀರ ವಿವಾದ ಸೇರಿ ನಾಲ್ಕು ಅಂಶದ ಕಾರ್ಯತಂತ್ರಗಳನ್ನು ಹೆಣೆದು ವಿವಾದ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದೆವು. ಆದರೆ, ಮುಂದಿನ ದಿನಗಳಲ್ಲಿ ಅದು ನಡೆಯುವ ಸಾಧ್ಯತೆ ಇಲ್ಲ’ ಎಂದು ಅವರು ‘ವಾಯ್ಸ್ ಆಫ್ ಅಮೆರಿಕ’ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟರು. ಭಾರತ ಮಾತ್ರವಲ್ಲ ಪಾಕಿಸ್ತಾನ ಕೂಡ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರವಾಗಿದೆ. ನಮ್ಮ ಸ್ವತ್ತಿನ ಮೇಲೆ ನಿಯಂತ್ರಣ ಸಾಧಿಸಲು ಯಾರೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಬೇಕೆಂದಾಗ ಬಳಸಿಕೊಳ್ಳುವ ಅಮೆರಿಕ
‘ಪಾಕಿಸ್ತಾನವನ್ನು ಅಗತ್ಯ ಇದ್ದಾಗ ಬಳಸಿಕೊಳ್ಳುವ ಅಮೆರಿಕ, ಬೇಡವೆಂದಾಗ ದೂರ ತಳ್ಳುತ್ತಿದೆ’ ಎಂದು ಮುಷರಫ್‌ ದೂರಿದ್ದಾರೆ.

ADVERTISEMENT

‘ಭಾರತದ ಜೊತೆ ಸೇರಿ ಪಾಕ್ ವಿರುದ್ಧ ಒಗ್ಗೂಡುತ್ತಿರುವುದೇ ಇದಕ್ಕೆ ಕಾರಣ’ ಎಂದು  ಆಪಾದಿಸಿದರು.

‘ಭಾರತ ಮತ್ತು ಪಾಕಿಸ್ತಾನ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕವು ಭಾರತವನ್ನು ಬಹಿರಂಗವಾಗಿಯೇ ಬೆಂಬಲಿಸಿದೆ. ಇದರ ಪರಿಣಾಮ ನೇರವಾಗಿ ಪಾಕಿಸ್ತಾನದ ಮೇಲೆ ಉಂಟಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಭಾರತದ ಪಾತ್ರದ ಬಗ್ಗೆ ವಿಶ್ವಸಂಸ್ಥೆ ಪರೀಕ್ಷೆ ಮಾಡಬೇಕೆ‌ಂಬುದು ನಮ್ಮ ಅಪೇಕ್ಷೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.