ADVERTISEMENT

ಯಕೃತ್ ಕಸಿ ಶಸ್ತ್ರಚಿಕಿತ್ಸೆ: ಭಾರತ- ಪಾಕ್ ವೈದ್ಯರ ಸಾಧನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ಲಾಹೋರ್ (ಪಿಟಿಐ): ಅತ್ಯಂತ ಕ್ಲಿಷ್ಟಕರವಾದ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ಶೇಖ್ ಜಾಯೇದ್ ಆಸ್ಪತ್ರೆಯಲ್ಲಿ ಭಾರತ ಮತ್ತು ಪಾಕಿಸ್ತಾನ ವೈದ್ಯರ ತಂಡ ಶುಕ್ರವಾರ ಜಂಟಿಯಾಗಿ ನೆರವೇರಿಸಿದೆ.

`ಜೀವಂತ ದಾನಿಯ ಯಕೃತ್ತನ್ನು ಕಸಿ ಮಾಡುವುದು ಅತ್ಯಂತ ಸೂಕ್ಷ್ಮ ಮತ್ತು ಜಟಿಲವಾದ ಕಾರ್ಯ. ಏಕೆಂದರೆ ಈ ಶಸ್ತ್ರಚಿಕಿತ್ಸೆಯಲ್ಲಿ ರೋಗಿ ಮತ್ತು ದಾನಿ ಇಬ್ಬರೂ ಅಪಾಯದ ಸ್ಥಿತಿಯಲ್ಲಿರುತ್ತಾರೆ. ಇದೀಗ ಇಂತಹ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳು, ಅಂಗಾಂಗ ದಾನಿಗಳ ಸ್ಥಿತಿ ಸ್ಥಿರವಾಗಿದ್ದು, ಅತ್ಯಂತ ಎಚ್ಚರಿಕೆ ವಹಿಸಲಾಗಿದೆ~ ಎಂದು ತಜ್ಞರ ತಂಡ ತಿಳಿಸಿದೆ.

ಪಾಕಿಸ್ತಾನದ ವೈದ್ಯರ ಮನವಿಯ ಮೇರೆಗೆ ದೆಹಲಿಯ ಅಪೋಲೊ ಆಸ್ಪತ್ರೆಯ ಅಂಗಾಂಗ ಕಸಿ ತಜ್ಞ ಸುಭಾಷ್ ಗುಪ್ತ ಜತೆ ಅವರ ಮೂವರು ಸಹೋದ್ಯೋಗಿಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದರು. `ಉಭಯ ದೇಶಗಳ ತಜ್ಞ ವೈದ್ಯರ ಸಹಯೋಗದಲ್ಲಿ ಮೊದಲ ಬಾರಿ ನಡೆದ ಇಂತಹ ಶಸ್ತ್ರಚಿಕಿತ್ಸೆ ಪಾಕಿಸ್ತಾನದ ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು~ ಎಂದು ಪಾಕಿಸ್ತಾನದ ವೈದ್ಯರು ಹೇಳಿದ್ದಾರೆ. ಖಾನುಮ್ ಮೌಲ ಅವರಿಗೆ ಹತ್ತಿರದ ಸಂಬಂಧಿ ಇರ್ಷಾದ್ ಬೀಬಿ ಅವರ ಯಕೃತ್ತು ಮತ್ತು 45 ವರ್ಷದ ಅಬಿದಾ ಪರ್ವೀನ್ ಎಂಬುವವರಿಗೆ ಅವರ 19 ವರ್ಷದ ಮಗ ನೀಡಿದ ಯಕೃತ್ತನ್ನು ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.