ಆಡೆನ್/ಯೆಮನ್ (ಎಎಫ್ಪಿ): ಅಧ್ಯಕ್ಷ ಅಲಿ ಅಬ್ದುಲಾ ಸಲೆ ಅಧಿಕಾರದಿಂದ ಕೆಳಕ್ಕಿಳಿಯುವಂತೆ ಆಗ್ರಹಿಸಿ ಯೆಮನ್ ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಶನಿವಾರ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ನಾಲ್ವರು ಮೃತಪಟ್ಟಿದ್ದಾರೆ.
ಮೂರು ದಶಕಗಳ ತನ್ನ ಸರ್ವಾಧಿಕಾರತ್ವದಿಂದ ಕೆಳಕ್ಕಿಳಿಯುವಂತೆ ಸಲೆ ವಿರುದ್ಧ ಫೆ.16ರಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇದುವರೆಗೆ 19 ಜನ ಮೃತಪಟ್ಟಿದ್ದಾರೆ.
ಬುಡಕಟ್ಟುಗಳ ಬೆಂಬಲ: ಸಲೆ ಪದಚ್ಯುತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಯೆಮನ್ನ ಅತ್ಯಂತ ಪ್ರಬಲ ಬುಡಕಟ್ಟು ಸಮುದಾಯಗಳಾದ ಹಶೀದ್ ಮತ್ತು ಬಾಕಿಲ್ಗಳ ಮುಖಂಡರು ಬೆಂಬಲ ನೀಡಿದ್ದಾರೆ.
ಪ್ರತಿಭಟನಾಕಾರರೊಂದಿಗೆ ಮಾತುಕತೆ: ಗಡಾಫಿ ಪುತ್ರ
ಕೈರೊ/ಟ್ರಿಪೊಲಿ (ಡಿಪಿಎ): ಗಡಾಫಿ ಪದಚ್ಯುತಿಗೆ ಅಂತರರಾಷ್ಟ್ರೀಯ ಸಮುದಾಯದ ಒತ್ತಡ ಹೆಚ್ಚುತ್ತಿರುವಂತೆಯೇ ಸರ್ವಾಧಿಕಾರಿಯ ಪುತ್ರ ಸೈಫ್ ಅಲ್-ಇಸ್ಲಾಂ ಗಡಾಫಿ, ಹಿಂಸಾಚಾರವನ್ನು ತಡೆಯಲು ಸರ್ಕಾರಿ ವಿರೋಧಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
‘ನಾವು ಭಯೋತ್ಪಾದಕರೊಂದಿಗೆ ಹೋರಾಡುತ್ತಿದ್ದೇವೆ’ ಎಂದು ಹೇಳಿರುವ ಸೈಫ್, ‘ಉಗ್ರರ ಮೇಲೆ ದಾಳಿ ನಡೆಸದೇ ಇರಲು ಸೇನೆ ನಿರ್ಧರಿಸಿದೆ. ಅಲ್ಲದೇ ಅವರೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.ಶಾಂತಿಯುತವಾಗಿ ಈ ಪ್ರಕ್ರಿಯೆ ನಡೆಯುವ ವಿಶ್ವಾಸವನ್ನು ನಾವು ಹೊಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.