ಇಸ್ಲಾಮಾಬಾದ್/ಲಾಹೋರ್ (ಪಿಟಿಐ): 26/11ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಪಾಕಿಸ್ತಾನಕ್ಕೆ ಒದಗಿಸಿದ ಸಾಕ್ಷ್ಯಗಳನ್ನು ‘ಸುಳ್ಳಿತ ಕಂತೆ’ ಎಂದು ಟೀಕಿಸಿದ ಆರೋಪಿಗಳ ಪರ ವಕೀಲರ ವಿರುದ್ಧ ‘ನ್ಯಾಯಾಂಗ ನಿಂದನೆ’ಯಡಿ ಕ್ರಮ ಕೈಗೊಳ್ಳಬೇಕು ಎಂದು ವಿಶೇಷ ಸರ್ಕಾರಿ ವಕೀಲರು ಕೋರಿದ್ದಾರೆ.
ಈ ಕುರಿತು ಗುರುವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಶೇಷ ಸರ್ಕಾರಿ ವಕೀಲ ಚೌಧರಿ ಮೊಹಮ್ಮದ್ ಅಜರ್, ‘ಆರೋಪಿಗಳ ಪರ ವಕೀಲ ರಜಾ ರಿಜ್ಞಾನ್ ಅಬ್ಬಾಸಿ ಅವರು ಪತ್ರಿಕಾಗೋಷ್ಠಿ ನಡೆಸಿ ಭಾರತ ಒದಗಿಸಿದ ಸಾಕ್ಷ್ಯಗಳನ್ನು ‘ಸುಳ್ಳಿನ ಕಂತೆ’ ಎಂದು ಟೀಕಿಸುವ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ’ ಎಂದರು.
‘ಪ್ರಕರಣ ಕುರಿತು, ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿರುವ ಭಯೋತ್ಪಾದನ ನಿಗ್ರಹ ಕೋರ್ಟ್ನಲ್ಲಿ ನಡೆದ ರಹಸ್ಯ ವಿಚಾರಣೆಯಲ್ಲಿ ಸ್ವತಃ ಕಾಣಿಸಿಕೊಂಡಿದ್ದ ವಕೀಲರೇ ಕೋರ್ಟ್ ನಿಯಮವನ್ನು ಉಲ್ಲಂಘಿಸಿರುವುದು ‘ನ್ಯಾಯಾಂಗ ನಿಂದನೆ’ಯಾಗಿದೆ’. ‘ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದ್ದು, ಮತ್ತೆ ಡಿ. 11ರಂದು ನಡೆಯಲಿರುವ ವಿಚಾರಣೆ ವೇಳೆ ಆರೋಪಿ ಪರ ವಕೀಲರ ನ್ಯಾಯಾಂಗ ನಿಂದನೆ ವಿಷಯವನ್ನು ಪ್ರಸ್ತಾಪಿಸಲಾಗುವುದು’ ಎಂದು ಅಜರ್ ಇದೇ ವೇಳೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.