ADVERTISEMENT

ವಿದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಮೆರವಣಿಗೆಯಲ್ಲಿ ಸ್ಫೋಟ: 16 ಸಾವು
ಲಾಹೋರ್ (ಪಿಟಿಐ):
ಪಂಜಾಬ್ ಪ್ರಾಂತ್ಯದ ಖಾನ್ಪುರ ನಗರದಲ್ಲಿ ಭಾನುವಾರ ಶಿಯಾ ಮುಸ್ಲಿಂ ಪಂಗಡದ ಮೆರವಣಿಗೆಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 16 ಜನರು ಮೃತಪಟ್ಟಿದ್ದಾರೆ.
ಈ ಮೆರವಣಿಗೆಯಲ್ಲಿ ಸುಮಾರು 150 ಜನರು ಭಾಗವಹಿಸಿದ್ದರು. ಮೆರವಣಿಗೆಕಾರರು ಹಿಡಿದಿದ್ದ ಧ್ವಜದ ಪತಾಕೆಗಳು ವಿದ್ಯುತ್ ತಂತಿಯನ್ನು ಸ್ಪರ್ಶ ಮಾಡಿದ್ದರಿಂದ ಶಾರ್ಟ್ ಸರ್ಕಿಟ್ ಉಂಟಾಗಿ ದುರಂತ ಸಂಭವಿಸಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಶಿಕ್ಷಕಿಯ ಕಾಲು ಮುರಿದ ಬಾಲಕ
ಲಂಡನ್ (ಐಎಎನ್‌ಎಸ್):
ಕರಾಟೆಯ ಕಿಕ್ ಮೂಲಕ 10 ವರ್ಷದ ಬಾಲಕನೊಬ್ಬ ತನ್ನ 58 ವರ್ಷದ ಶಿಕ್ಷಕಿಯ ಕಾಲು ಮುರಿದಿರುವ ಘಟನೆ ಲಂಡನ್‌ನಿಂದ ವರದಿಯಾಗಿದೆ.

ಎರಡು ಮಕ್ಕಳ ತಾಯಿಯಾಗಿರುವ ಶಿಕ್ಷಕಿಯ ಕಾಲಿನ ಮೊಣಕಾಲು ಚಿಪ್ಪಿಗೆ ಈಗ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈಕೆ 18 ವಾರಗಳ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ ಎಂದು `ಡೈಲಿ ಎಕ್ಸ್‌ಪ್ರೆಸ್~ ವರದಿ ಮಾಡಿದೆ.

ಪಬ್ ಮೇಲೆ ದಾಳಿ: 4 ಸಾವು
ಅಬುಜಾ (ಪಿಟಿಐ):
ಮೋಟಾರ್ ಬೈಕ್‌ನಲ್ಲಿ ಆಗಮಿಸಿದ ಬಂದೂಕುಧಾರಿಯೊಬ್ಬ ಪಬ್ ಮೇಲೆ ದಾಳಿ ನಡೆಸಿ ನಾಲ್ವರನ್ನು ಕೊಂದು ಹಾಕಿದ ಘಟನೆ ಈಶಾನ್ಯ ನೈಜೀರಿಯಾದಲ್ಲಿ ಶುಕ್ರವಾರ ನಡೆದಿದೆ.
ಮುಸ್ಲಿಂ ತೀವ್ರವಾದಿಗಳ ಗುಂಪಿಗೆ ಸೇರಿದ ವ್ಯಕ್ತಿ ಈ ಕೃತ್ಯ ನಡೆಸಿರುವ ಶಂಕೆಯಿದೆ ಎಂದು ಗೊಂಬೆ ರಾಜ್ಯದ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ದುಬೈನಲ್ಲಿ ಕಥಕ್ಕಳಿ ಗಾಳಿಪಟ
ದುಬೈ (ಪಿಟಿಐ):
ಇಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಗಾಳಿಪಟ ಸ್ಪರ್ಧೆಯಲ್ಲಿ ಭಾರತ, ಕುವೈತ್ ಮತ್ತು ಅಮೆರಿಕದ ಗಾಳಿಪಟ ತಂಡಗಳು ಪಾಲ್ಗೊಂಡಿವೆ.

ಏಷ್ಯಾದಲ್ಲಿಯೇ ಅತಿದೊಡ್ಡ ಗಾಳಿಪಟ ಎಂದು ಬಿಂಬಿತವಾಗಿರುವ ಹಾಗೂ ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಗಿರುವ `ಕಥಕ್ಕಳಿ~ ಗಾಳಿಪಟ ಕೇಂದ್ರ ಬಿಂದುವಾಗಿದ್ದು, ದುಬೈನ ಆಕಾಶದಲ್ಲಿ ಹಾರಾಡಿದೆ.
ಈ ಸ್ಪರ್ಧೆಯಲ್ಲಿ ಮಂಗಳೂರಿನ ತಂಡವು ಪಾಲ್ಗೊಂಡಿರುವುದು ವಿಶೇಷವಾಗಿದೆ. ರಂಗು ರಂಗಿನ, ವಿವಿಧ ಕಲಾ ಪ್ರಾಕಾರದ ಹಾಗೂ ವಿವಿಧ ಸಂದೇಶಗಳನ್ನು ಹೊತ್ತ ಗಾಳಿಪಟಗಳನ್ನು ವಿಭಿನ್ನ ತಂಡಗಳು ಹಾರಿಸಿವೆ.
ಅಮೆರಿಕದ ಗೋಮ್‌ಬರ್ಗ್ ಗಾಳಿಪಟ ತಂಡ, ಕುವೈತ್‌ನ ಬುಹಮದ್ ಗಾಳಿಪಟ ತಂಡಗಳು ದೊಡ್ಡ ದೊಡ್ಡ ಗಾಳಿಪಟಗಳನ್ನು ಹಾರಿಸುವ ಮೂಲಕ ಸಾವಿರಾರು ಪ್ರೇಕ್ಷಕರ ಮನಸೂರೆಗೊಂಡವು.

ಮಂಗಳೂರಿನ `ಕಥಕ್ಕಳಿ~ ತಂಡದವರು ಜಿಲ್ಲೆಯ ಜಾನಪದ ನ್ಯತ್ಯಗಳ ಚಿತ್ರ ಇರುವ ಗಾಳಿಪಟಗಳನ್ನು ಹಾರಿಸುವ ಮೂಲಕ ಜನರ ಗಮನ ಸೆಳೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.