ಕಠ್ಮಂಡು: ವಿಮಾನವನ್ನು ಯಾವ ರನ್ವೇಯಲ್ಲಿ ಇಳಿಸಬೇಕು ಎಂಬ ಗೊಂದಲದಿಂದಾಗಿ ಇಲ್ಲಿನ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಟಿಐಎ) ಸೋಮವಾರ ವಿಮಾನ ಪತನ ಆಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಂಗ್ಲಾದೇಶದ ಢಾಕಾದಿಂದ ನೇಪಾಳದ ಟಿಐಎಗೆ ಬಂದ ಯುಎಸ್–ಬಾಂಗ್ಲಾ ಏರ್ಲೈನ್ಸ್ನ ವಿಮಾನವು ಭೂ ಸ್ಪರ್ಶದ ವೇಳೆ ರನ್ವೇಯಿಂದ ಜಾರಿದ ನಂತರ ಬೆಂಕಿ ತಗುಲಿ ಪತನಗೊಂಡಿತ್ತು. ಇದರಲ್ಲಿದ 71 ಜನರ ಪೈಕಿ 51 ಮಂದಿ ಸಾವನ್ನಪ್ಪಿದ್ದರು.
ವಿಮಾನದ ಕಪ್ಪು ಪೆಟ್ಟಿಗೆ ಪತ್ತೆಯಾಗಿದ್ದು, ಪೈಲಟ್ ಮತ್ತು ವಿಮಾನ ನಿಯಂತ್ರಕರ ನಡುವಿನ ಸಂಭಾಷಣೆ ಅದರಲ್ಲಿ ದಾಖಲಾಗಿದೆ. ಅಧಿಕಾರಿಗಳು ಈ ಸಂಭಾಷಣೆಯನ್ನು ಆಧರಿಸಿ, ‘ಗೊಂದಲದಿಂದಾಗಿ ವಿಮಾನ ಪತನವಾದಂತೆ ತೋರುತ್ತದೆ’ ಎಂದಿದ್ದಾರೆ.
‘ಕೊನೆಯ ನಾಲ್ಕು ನಿಮಿಷಗಳಲ್ಲಿ ರನ್ವೇಯ ದಕ್ಷಿಣ ಭಾಗದಿಂದ (ರನ್ವೇ 02) ಅಥವಾ ಉತ್ತರ ಭಾಗದಿಂದ (ರನ್ವೇ 20) ವಿಮಾನ ಭೂ ಸ್ಪರ್ಶ ಮಾಡಿಸುವ ಕುರಿತು ಪೈಲಟ್ಗೆ ಗೊಂದಲ ಉಂಟಾಗಿದೆ’ ಎಂದು ‘ನೇಪಾಳಿ ಟೈಮ್ಸ್’ ವರದಿ ಮಾಡಿದೆ.
ವಿಮಾನ ಭೂ ಸ್ಪರ್ಶಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲದ ಕುರಿತು ವಿಮಾನಯಾನ ಸಂಸ್ಥೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.