ADVERTISEMENT

ಶಾಶ್ವತ ಕದನ ವಿರಾಮಕ್ಕೆ ಒಕ್ಕೊರಲ ಒತ್ತಾಯ

ಅಫ್ಗಾನಿಸ್ತಾನದಲ್ಲಿ ನಡೆದ ಶಾಂತಿ ಶೃಂಗಸಭೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:15 IST
Last Updated 3 ಮೇ 2019, 20:15 IST
ಅಫ್ಗಾನಿಸ್ತಾನದಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಕುರಿತು ಚರ್ಚಿಸಲು ಆಯೋಜಿಸಿದ್ದ ಬೃಹತ್‌ ಸಮಾವೇಶದ ಅಂತಿಮ ದಿನವಾದ ಶುಕ್ರವಾರ ಭಾಗವಹಿಸಿದ್ದ ಪ್ರತಿನಿಧಿಗಳು–ಎಪಿ/ಪಿಟಿಐ ಚಿತ್ರ
ಅಫ್ಗಾನಿಸ್ತಾನದಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಕುರಿತು ಚರ್ಚಿಸಲು ಆಯೋಜಿಸಿದ್ದ ಬೃಹತ್‌ ಸಮಾವೇಶದ ಅಂತಿಮ ದಿನವಾದ ಶುಕ್ರವಾರ ಭಾಗವಹಿಸಿದ್ದ ಪ್ರತಿನಿಧಿಗಳು–ಎಪಿ/ಪಿಟಿಐ ಚಿತ್ರ   

ಕಾಬುಲ್‌ : ಅಫ್ಗಾನಿಸ್ತಾನದಲ್ಲಿ ತಕ್ಷಣ ಮತ್ತು ಶಾಶ್ವತ ಕದನ ವಿರಾಮ ಘೋಷಿಸಬೇಕು ಎನ್ನುವ ಒಕ್ಕೊರಲಿನ ಆಗ್ರಹದೊಂದಿಗೆ ಐತಿಹಾಸಿಕ ‘ಲೊಯ ಜಿರ್ಗ’ (ಶಾಂತಿ ಶೃಂಗಸಭೆ) ಶುಕ್ರವಾರ ಕೊನೆಗೊಂಡಿತು.

ಒಂದು ವಾರ ನಡೆದ ಈ ಬೃಹತ್‌ ಶೃಂಗಸಭೆಯಲ್ಲಿ ಧಾರ್ಮಿಕ ಮುಖಂಡರು, ಬುಡಕಟ್ಟು ನಾಯಕರು ಹಾಗೂ ರಾಜಕೀಯ ಪ್ರಮುಖರು ಸೇರಿದಂತೆ 3,200ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿ ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಮತ್ತು ತಾಲಿಬಾನ್‌ನೊಂದಿಗೆ ಶಾಂತಿಯುತ ಒಪ್ಪಂದದ ಸಂಭವನೀಯ ಷರತ್ತುಗಳ ಕುರಿತು ಚರ್ಚಿಸಿದರು.

ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಡಿವಾಣ ಹಾಕಲು ಮಹತ್ವದ ಹೆಜ್ಜೆ ಇರಿಸಬೇಕಿದೆ ಎಂದು ಗುರುವಾರ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಅಧಿಕಾರಿಗಳು ಅಭಿಪ್ರಾಯಪಟ್ಟರು.

ADVERTISEMENT

‘ಯಾವುದೇ ಕಾರಣವಿಲ್ಲದೆ ಪ್ರತಿನಿತ್ಯ ಅಫ್ಗಾನಿಗಳು ಸಾಯುತ್ತಿದ್ದಾರೆ. ಹಾಗಾಗಿ ಬೇಷರತ್‌ ಕದನ ವಿರಾಮ ಘೋಷಣೆಯಾಗಲೇಬೇಕು’ ಎಂದು ಶೃಂಗಸಭೆಯ ಸಮಿತಿಯೊಂದರ ಮುಖ್ಯಸ್ಥ ಮೊಹಮ್ಮದ್‌ ಖುರೇಷಿ ಒತ್ತಾಯಿಸಿದರು.

ಅಫ್ಗಾನ್‌ ನೆಲದಲ್ಲಿರುವ ವಿದೇಶಿ ಭದ್ರತಾ ಪಡೆಗಳನ್ನು ಹಿಂದಕ್ಕೆ ಕಳುಹಿಸುವುದು ಹಾಗೂ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ನಡೆಸದಂತೆ ತಾಲಿಬಾನ್‌ನಿಂದ ಖಾತರಿ ಪಡೆಯುವ ಕುರಿತು ಶೃಂಗಸಭೆ ಚರ್ಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.