ADVERTISEMENT

ಸಂಕ್ಷಿಪ್ತ ಸುದ್ದಿ/ ವಿದೇಶ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ಚೀನಾ ಜತೆ ಮಾತುಕತೆಗೆ ಮೆನನ್

ಬೀಜಿಂಗ್ (ಪಿಟಿಐ): ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ವಿವಾದಿತ ಗಡಿ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸುವ ಸಲುವಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಭಾನುವಾರ ಚೀನಾಕ್ಕೆ ಬಂದಿದ್ದಾರೆ.

ಮೂರು ದಿನಗಳ ಭೇಟಿಗಾಗಿ ಬಂದಿರುವ ಮೆನನ್ ಅವರು, ಚೀನಾ ಕಮ್ಯೂನಿಸ್ಟ್ ಪಕ್ಷಕ್ಕೆ (ಸಿಪಿಸಿ) ಹೊಸದಾಗಿ ಆಯ್ಕೆಯಾಗಿರುವ ನಾಯಕರುಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಮೆನನ್ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಚುನಾವಣೆ: ಷಿಯಾಗಳ ಮೇಲುಗೈ

ಕುವೈತ್ ನಗರ (ಎಎಫ್‌ಪಿ): ಕುವೈತ್‌ನ ಷಿಯಾ ಅಲ್ಪಸಂಖ್ಯಾತರು ಮೊದಲ ಬಾರಿಗೆ 50 ಸದಸ್ಯ ಬಲದ ಸಂಸತ್‌ನಲ್ಲಿ ಮೇಲುಗೈ ಸಾಧಿಸಿದ್ದಾರೆ.
ಸುನ್ನಿ ಬಹುಸಂಖ್ಯಾತರ ಬೆಂಬಲ ಇರುವ ವಿರೋಧ ಪಕ್ಷದವರು ಚುನಾವಣೆಯನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಶೇ 26.7ರಷ್ಟು ಮತಗಳನ್ನು ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಹದಿನೈದು ಸ್ಥಾನ ಗೆದ್ದಿರುವ ಷಿಯಾಗಳು, 2009ರಲ್ಲಿ 9 ಸ್ಥಾನ, 2012ರಲ್ಲಿ 7 ಸ್ಥಾನ ಗ್ದ್ದೆದಿದ್ದರು. ಕುವೈತ್‌ನ 12 ಲಕ್ಷ ಸ್ಥಳೀಯ ಜನಸಂಖ್ಯೆಯಲ್ಲಿ ಷಿಯಾ ಪಂಗಡದವರು ಶೇ 30ರಷ್ಟಿದ್ದಾರೆ. 

ನ್ಯಾಟೊ ಶಿಬಿರದ ಮೇಲೆ ಆಕ್ರಮಣ

ಕಾಬೂಲ್ (ಐಎಎನ್‌ಎಸ್): ಆಫ್ಘಾನಿಸ್ತಾನದಲ್ಲಿನ ನ್ಯಾಟೊ ಪಡೆಗಳ ಶಿಬಿರದ ಮೇಲೆ ಭಾನುವಾರ ತಾಲಿಬಾನ್ ಬಂಡುಕೋರರು ಆತ್ಮಹತ್ಯಾ ದಾಳಿ ನಡೆಸಿದ್ದು, 9 ಉಗ್ರರು ಒಳಗೊಂಡಂತೆ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ.
ಕಂದಹಾರ್ (ಎಇಪಿ): ತಾಲಿಬಾಲ್ ಬಂಡುಕೋರರು ಜಲಾಲಾಬಾದ್ ವಿಮಾನ ನಿಲ್ದಾಣದ ಬಳಿ ಭಾನುವಾರ ಮುಂಜಾನೆ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಮೂವರು ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದು, ಹಲವು ವಿದೇಶಿ ಪಡೆಗಳ ಯೋಧರು ಗಾಯಗೊಂಡಿದ್ದಾರೆ.

ಅಣೆಕಟ್ಟು ಕುಸಿತ ನಾಲ್ವರು ನಾಪತ್ತೆ

ನಾಂಪೆನ್ (ಎಪಿ): ಪಶ್ಚಿಮ ಕಾಂಬೋಡಿಯಾದಲ್ಲಿ ಅಟಾಯ್ ನದಿಗೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ಜಲವಿದ್ಯುತ್ ಉತ್ಪಾದನೆಯ ಅಣೆಕಟ್ಟೆ ನಿರ್ಮಾಣ ಹಂತದ್ಲ್ಲಲೇ ಕುಸಿದು ಬಿದ್ದು ನಾಲ್ವರು ನಾಪತ್ತೆಯಾಗಿದ್ದು ಉಳಿದ ನಾಲ್ವರು ತೀವ್ರ ಗಾಯಗೊಂಡಿದ್ದಾರೆ.

ಗುಂಪು ಘರ್ಷಣೆ: 26 ಸಾವು

ಮೊಗದಿಶು (ಎಎಫ್‌ಪಿ): ಗಲಭೆ ಪೀಡಿತ ಸೋಮಾಲಿಯಾದಲ್ಲಿ ಶಸ್ತ್ರಸಜ್ಜಿತ ಗುಂಪುಗಳ ನಡುವೆ ಹುಲ್ಲುಗಾವಲು ಭೂಮಿ ಮತ್ತು ನೀರಿಗಾಗಿ ನಡೆದ ಭೀಕರ ಕದನದಲ್ಲಿ ಕನಿಷ್ಠ 26 ಜನ ಮೃತಪಟ್ಟಿದ್ದಾರೆ. ಜಾನುವಾರುಗಳಿಗೆ ಅಗತ್ಯವಿರುವ ಹುಲ್ಲು ಮತ್ತು ನೀರಿಗಾಗಿ ಈ ರೀತಿಯ ಘರ್ಷಣೆಗಳು ಇಲ್ಲಿ ಸಾಮಾನ್ಯವಾಗಿವೆ.

ಆಸ್ಟ್ರೇಲಿಯ: ಭಾರಿ ಭೂಕಂಪನ

ಸಿಡ್ನಿ (ಎಇಪಿ): ದಕ್ಷಿಣ ಫೆಸಿಫಿಕ್ ಸಾಗರದಲ್ಲಿ ಭಾನುವಾರ ಭಾರಿ ಭೂಕಂಪನ ಸಂಭವಿಸಿದೆ. ಭೂಕಂಪನದ ತೀವ್ರತೆಯು 6.4 ದಾಖಲಾಗಿದ್ದು, ಯಾವುದೇ ಸಾವು ನೋವು ವರದಿಯಾಗಿಲ್ಲ ಎಂದು ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ.

ಚೀನಾದಲ್ಲಿ ಲಘು ಭೂಕಂಪನ

ಬೀಜಿಂಗ್ (ಪಿಟಿಐ): ಚೀನಾದ ನೈರುತ್ಯ ಭಾಗದ ಸಿಚೌನ್ ಪ್ರಾಂತ್ಯದಲ್ಲಿ ಶನಿವಾರ ಸಂಜೆ ಲಘು ಭೂಕಂಪನವಾಗಿದ್ದು, ಅದರ ತೀವ್ರತೆಯು ರಿಕ್ಟರ್‌ಮಾಪಕದಲ್ಲಿ 4.3ರಷ್ಟು ದಾಖಲಾಗಿದೆ. ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚೀನಾ ಗಣಿಯಲ್ಲಿ ಸಿಲುಕಿದ 14 ಜನ

ಬೀಜಿಂಗ್ (ಪಿಟಿಐ): ಭಾನುವಾರ ಈಶಾನ್ಯ ಚೀನಾದ ಹಿಲಾಂಗ್ ಜಿಯಾಂಗ್ ಪ್ರಾಂತ್ಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದ್ದಾಗ 14 ಮಂದಿ ಗಣಿಯಲ್ಲಿ ಸಿಕ್ಕಿಕೊಂಡಿದ್ದು ಉಳಿದ ಇಬ್ಬರನ್ನು ರಕ್ಷಿಸಲಾಗಿದೆ. ಚೀನಾದ ರಕ್ಷಣಾ ಪಡೆಯವರು ಗಣಿಯಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.