ADVERTISEMENT

ಸಮರ್ಥನೆ ಮುಂದುವರಿಸಿದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 9:20 IST
Last Updated 18 ಡಿಸೆಂಬರ್ 2013, 9:20 IST

ವಾಷಿಂಗ್ಟನ್ (ಐಎಎನ್ಎಸ್): ನ್ಯೂಯಾರ್ಕ್‌­ನಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಜತೆ ತನ್ನ ಅಧಿಕಾರಿಗಳು ನಡೆದುಕೊಂಡಿರುವ ರೀತಿ ಸೂಕ್ತವಾಗಿದೆ ಎಂದು ಅಮೆರಿಕ ಬುಧವಾರ ಸಮರ್ಥಿಸಿಕೊಂಡಿದೆ. ಅಲ್ಲದೆ ಭಾರತದಲ್ಲಿನ ತನ್ನ ರಾಜತಾಂತ್ರಿಕ ಅಧಿಕಾರಿಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಒತ್ತಾಯಿಸಿದೆ.

ಅಲ್ಲದೆ ದೇವಯಾನಿ ಅವರ ವಿಷಯವಾಗಿ ಬೇಷರತ್ತಾಗಿ ಕ್ಷಮೆಯಾಚಿಸುವಂತೆ ಭಾರತದ ಬೇಡಿಕೆಯನ್ನು ಅಮೆರಿಕ ಪರಿಗಣಿಸಲಿಲ್ಲ. ಪ್ರಕರಣದ ಕುರಿತು ವಿಷಾದ ವ್ಯಕ್ತಪಡಿಸಲು ನಿರಾಕರಿಸಿದ್ದು, ದೇವಯಾನಿ ಅವರ ವಿಚಾರಣೆ ವೇಳೆ ಸೂಕ್ತ ಕ್ರಮಗಳನ್ನು ಅನುಸರಿಸಲಾಗಿದೆ ಎಂದಿದೆ.

ಭಾರತದೊಂದಿಗಿನ ಸಂಬಂಧ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ದೇವಯಾನಿ ಪ್ರಕರಣ  ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪರಿಣಾಮ ಬೀರದು ಎಂದು ರಾಜ್ಯ ವಕ್ತಾರೆ ಮೆರಿ ಹರ್ಫ್ ತಿಳಿಸಿದ್ದಾರೆ.

ADVERTISEMENT

ದೇವಯಾನಿ ಅವರನ್ನು ಅಮೆರಿಕದ ಅಧಿಕಾರಿಗಳು ನಡೆಸಿಕೊಂಡ ರೀತಿಯನ್ನು ಭಾರತ ತೀವ್ರವಾಗಿ ಪ್ರತಿಭಟಿಸಿದ್ದು, ಪ್ರತೀಕಾರದ  ಕ್ರಮವಾಗಿ ಅಮೆರಿಕದ ರಾಜ­ತಾಂತ್ರಿಕರು ಹಾಗೂ ರಾಯಭಾರ ಕಚೇರಿ,  ಕಾನ್ಸುಲ್‌ ಕಚೇರಿಗಳ ಸಿಬ್ಬಂದಿಗೆ ನೀಡಲಾದ ಹಲವು ವಿನಾಯ್ತಿ ಹಾಗೂ ಸೌಲಭ್ಯಗಳನ್ನು ಮಂಗಳವಾರ ವಾಪಸ್‌ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.