ADVERTISEMENT

ಸಿಂಗ್ ಮ್ಯಾನ್ಮಾರ್ ಪ್ರವಾಸ ಆರಂಭ

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST
ಸಿಂಗ್ ಮ್ಯಾನ್ಮಾರ್ ಪ್ರವಾಸ ಆರಂಭ
ಸಿಂಗ್ ಮ್ಯಾನ್ಮಾರ್ ಪ್ರವಾಸ ಆರಂಭ   

ನವದೆಹಲಿ (ಪಿಟಿಐ): `ಭಾರತ ಮತ್ತು ಮ್ಯಾನ್ಮಾರ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ವ್ಯಾಪಾರ, ಬಂಡವಾಳ ಹೂಡಿಕೆ, ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯ ಇದೆ~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

`ಪ್ರಜಾಸತ್ತಾತ್ಮಕ ವ್ಯವಸ್ಥೆಯತ್ತ ಹೊರಳಲು ಮ್ಯಾನ್ಮಾರ್ ಸರ್ಕಾರ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ. ಆ ದೇಶ ವಿಶಾಲ ದೃಷ್ಟಿಕೋನದಿಂದ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಭಾರತ ಸಿದ್ಧ~ ಎಂದು ಮೂರು ದಿನಗಳ ಮ್ಯಾನ್ಮಾರ್ ಪ್ರವಾಸಕ್ಕೆ ಭಾನುವಾರ ಹೊರಡುವ ಮುನ್ನ ಪ್ರಧಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮ್ಯಾನ್ಮಾರ್ ಅಧ್ಯಕ್ಷ ಥೇನ್ ಸೇನ್ ಜೊತೆಗಿನ ಅವರ ಭೇಟಿ ವೇಳೆ, ವಾಣಿಜ್ಯ ಸಂಬಂಧ ವೃದ್ಧಿ, ಬಂಡವಾಳ ಹೂಡಿಕೆ, ಗಡಿ ಪ್ರದೇಶಗಳ ಅಭಿವೃದ್ಧಿ, ಎರಡು ದೇಶಗಳ ನಡುವೆ ಉತ್ತಮ ಸಂಪರ್ಕ ವ್ಯವಸ್ಥೆ, ಮಾನವ ಸಂಪನ್ಮೂಲ ಬಲಪಡಿಸುವ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಇದೇ ವೇಳೆ ಹಲವು ಒಪ್ಪಂದ ಮತ್ತು ಒಡಂಬಡಿಕೆಗಳಿಗೆ ಸಹಿ ಬೀಳಲಿದೆ. ಮ್ಯಾನ್ಮಾರ್‌ನ ವಿರೋಧ ಪಕ್ಷದ ನಾಯಕಿ ಹಾಗೂ ನೊಬೆಲ್ ಪುರಸ್ಕೃತೆ ಆಂಗ್ ಸಾನ್ ಸೂ ಕಿ ಅವರನ್ನು ಪ್ರಧಾನಿ ಮಂಗಳವಾರ ಭೇಟಿ ಮಾಡಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.