ADVERTISEMENT

ಸಿತಾರ್ ಸಾಮ್ರಾಟ ಅಸ್ತಂಗತ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಸ್ಯಾಂಡಿಯಾಗೊ (ಪಿಟಿಐ): ಜಗತ್ಪ್ರಸಿದ್ಧ ಸಿತಾರ್ ವಾದಕ, ಭಾರತೀಯ ಸಂಗೀತದ ಎಲ್ಲೆಯನ್ನು ಸಾಗರದಾಚೆಗೂ ವಿಸ್ತರಿಸಿದ ಪಂಡಿತ್ ರವಿಶಂಕರ್ (92) ಅವರು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಂಡಿಯಾಗೊದಲ್ಲಿ ಸ್ಥಳೀಯ ಕಾಲಮಾನ ಮಂಗಳವಾರ ಸಂಜೆ 4.30ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 6 ಗಂಟೆ) ನಿಧನರಾದರು.

ಶ್ವಾಸನಾಳದ ಸೋಂಕು ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಅವರನ್ನು ಕಳೆದ ವಾರ ಲಾ ಜೊಲಾದ ಸ್ಕ್ರಿಪ್ಸ್ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಗುರುವಾರ ಹೃದಯ ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು.
ಶಸ್ತ್ರಕ್ರಿಯೆ ಯಶಸ್ವಿಯಾದರೂ ಅದರಿಂದ ಚೇತರಿಸಿಕೊಳ್ಳಲು ಈ ಹಿರಿಯ ಸಂಗೀತಗಾರರಿಗೆ ಸಾಧ್ಯವಾಗಲಿಲ್ಲ. ಕೆಲ ವರ್ಷಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು.

ರವಿಶಂಕರ್ ಮರಣದ ಸುದ್ದಿಯನ್ನು ಅವರ ಪತ್ನಿ ಸುಕನ್ಯಾ ಹಾಗೂ ಪುತ್ರಿ ಅನೂಷ್ಕ ಶಂಕರ್ ಜಂಟಿ ಹೇಳಿಕೆಯ ಮೂಲಕ ಬಹಿರಂಗಗೊಳಿಸಿದರು.

ಅವರಿಗೆ ಪತ್ನಿ ಸುಕನ್ಯಾ, ಪುತ್ರಿ ಅನೂಷ್ಕ ಶಂಕರ್ ರೈಟ್, ಅಳಿಯ ಜೊ ರೈಟ್, ಮತ್ತೊಬ್ಬ ಪುತ್ರಿ ನೋರಾ ಜೋನ್ಸ್ (ವಿದೇಶಿ ಪತ್ನಿಯ ಮಗಳು) ಮೂವರು ಮೊಮ್ಮಕ್ಕಳು ಹಾಗೂ ನಾಲ್ವರು  ಮರಿ ಮೊಮ್ಮಕ್ಕಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.