ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮತ್ತು ಪ್ರಭಾವಿ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಮಂಗಳವಾರ ಇಲ್ಲಿ ಭೇಟಿಯಾಗಿ ದೇಶದಲ್ಲಿನ ಪ್ರಸಕ್ತ ರಾಜಕೀಯ ಬಿಕ್ಕಟ್ಟು ಬಗೆಹರಿಸಲು ಮಾತುಕತೆ ನಡೆಸಿದರು.
ಪಾಕಿಸ್ತಾನ್ ತೆಹ್ರೀಕ್–ಇ–ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಕೆನಡಾ ವಾಸಿಯಾದ ಧಾರ್ಮಿಕ ನಾಯಕ, ಪಾಕಿಸ್ತಾನ್ ಅವಾಮಿ ತೆಹ್ರೀಕ್ (ಪಿಎಟಿ) ಪಕ್ಷದ ಮುಖ್ಯಸ್ಥ ತಹೀರುಲ್ ಖಾದ್ರಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಧಾನಿ ಪದಚ್ಯುತಿ ಪ್ರತಿಭಟನೆಯ ಕಾರಣ ಈ ಮಹತ್ವದ ಸಭೆ ನಡೆದಿದೆ.
ಈ ಪ್ರತಿಭಟನೆಯಿಂದ ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಕೊನೆಗೊಳಿಸಲು ಸರ್ಕಾರವು ಮಾತುಕತೆಗೆ ಇಳಿದಿದೆ. ಇದರ ಭಾಗವಾಗಿ ಸೇನಾ ಮುಖ್ಯಸ್ಥರ ಜೊತೆ ಪ್ರಧಾನಿ ಚರ್ಚಿಸಿದ್ದಾರೆ. ಸಭೆಯಲ್ಲಿ ಪ್ರಸ್ತುತ ಪರಿಸ್ಥಿತಿ ಸೇರಿದಂತೆ ಒಟ್ಟಾರೆ ಭದ್ರತಾ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಗಿದೆ. ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಪ್ರಸಕ್ತ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆ ಒಮ್ಮತಾಭಿಪ್ರಾಯವನ್ನು ವ್ಯಕ್ತಪ-ಡಿಸಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಸರ್ಕಾರ ಮಾತುಕತೆಯ ವಿವರಗಳನ್ನು ನೀಡಿಲ್ಲ. ಆದರೆ ಸೇನೆಯು ಈಗಾಗಲೇ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳುವಂತೆ ಎರಡೂ ಕಡೆಯವರಿಗೆ ಕಿವಿಮಾತು ಹೇಳಿದೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆಸಲಾಗಿದೆ ಮತ್ತು ಜೂನ್ 17ರಂದು 14 ಪಿಎಟಿ ಬೆಂಬಲಿಗರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಧಾನಿ ಷರೀಫ್ ರಾಜೀನಾಮೆಗೆ ಆಗ್ರಹಿಸಿ, 13 ದಿನದಿಂದ ಪ್ರತಿಭಟನೆ ನಡೆಯುತ್ತಿರುವುದರಿಂದ ಪಾಕ್ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ.
ಈ ಸಂಬಂಧ ಪ್ರಧಾನಿ ಷರೀಫ್ ರಾಜೀನಾಮೆಗಾಗಿ ಎರಡೂ ಪಕ್ಷಗಳು ಗಡುವು ವಿಧಿಸಿವೆ. ಸೋಮವಾರ 48ಗಂಟೆಗಳ ಗಡುವು ವಿಧಿಸಿದ್ದ ಖಾದ್ರಿ, ಮಂಗಳವಾರ 23 ಗಂಟೆಗಳಲ್ಲಿ ಷರೀಫ್ ರಾಜೀನಾಮೆ ನೀಡದಿದ್ದರೆ ರಕ್ತಪಾತದ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಈ ಪಕ್ಷಗಳ ಎಲ್ಲ ಬೇಡಿಕೆ ಒಪ್ಪಿದ್ದು, ಆದರೆ ಪ್ರಧಾನಿ ರಾಜೀನಾಮೆ ಬೇಡಿಕೆಯನ್ನು ನಿರಾಕರಿಸಿದೆ. ಈ ಮಧ್ಯೆ, ಷರೀಫ್ ಸಹೋದರ ಶಹಬಾದ್ ಷರೀಫ್ ಚೀನಾಕ್ಕೆ ಭೇಟಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.