ADVERTISEMENT

ಬಲೂಚಿಸ್ತಾನದಲ್ಲಿ ಶಿಯಾ ಪಂಗಡದ 11 ಗಣಿ ಕಾರ್ಮಿಕರನ್ನು ಅಪಹರಿಸಿ ಹತ್ಯೆ

ಪಿಟಿಐ
Published 3 ಜನವರಿ 2021, 11:26 IST
Last Updated 3 ಜನವರಿ 2021, 11:26 IST
ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ ಭಾನುವಾರ ಶಿಯಾ ಹಜಾರಾ ಸಮುದಾಯಕ್ಕೆ ಸೇರಿದ 11 ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಖಂಡಿಸಿ, ಶಿಯಾ ಹಜಾರಾ ಸಮುದಾಯದ ಸದಸ್ಯರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ
ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ ಭಾನುವಾರ ಶಿಯಾ ಹಜಾರಾ ಸಮುದಾಯಕ್ಕೆ ಸೇರಿದ 11 ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಖಂಡಿಸಿ, ಶಿಯಾ ಹಜಾರಾ ಸಮುದಾಯದ ಸದಸ್ಯರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ   

ಕರಾಚಿ: ಪಾಕಿಸ್ತಾನದ ಅಲ್ಪಸಂಖ್ಯಾತ ಶಿಯಾ ಹಜಾರಾ ಸಮುದಾಯಕ್ಕೆ ಸೇರಿದ ಕಲ್ಲಿದ್ದಲು ಗಣಿಯ11 ಕಾರ್ಮಿಕರನ್ನು ಅಪಹರಿಸಿ, ನಂತರ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ ಭಾನುವಾರ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಚ್ಚ್ ಕಲ್ಲಿದ್ದಲು ಮೈದಾನದಲ್ಲಿ ಕೆಲಸಕ್ಕೆ ಹೊರಟ್ಟಿದ್ದ 11 ಕಾರ್ಮಿಕರನ್ನು ಅಪರಿಚಿತ ಬಂದೂಕುಧಾರಿಗಳು ಮಾರ್ಗಮಧ್ಯೆದಲ್ಲಿ ಅಪಹರಿಸಿ, ಪರ್ವತಗಳ ಸಮೀಪ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್’ ವರದಿ ಮಾಡಿದೆ.

6 ಗಣಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ಐವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ADVERTISEMENT

ಗಣಿಗಾರಿಕೆಗೆ ಹೊರಟಿದ್ದ ಕಾರ್ಮಿಕರಲ್ಲಿ ಶಿಯಾ ಹಜಾರಾ ಸಮುದಾಯಕ್ಕೆ ಸೇರಿದ ಕಾರ್ಮಿಕರನ್ನು ಮಾತ್ರ ಬಂದೂಕುಧಾರಿಗಳು ಅಪಹರಿಸಿದ್ದಾರೆ. ಉಳಿದ ಕಾರ್ಮಿಕರಿಗೆ ಯಾವುದೇ ಹಾನಿ ಮಾಡಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬಲೂಚಿಸ್ತಾನದ ಮುಖ್ಯಮಂತ್ರಿ ಜಾಮ್ ಕಮಲ್ ಖಾನ್, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೃತ್ಯವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ದುಷ್ಕೃತ್ಯದ ಹೊಣೆಯನ್ನು ಇದುವರೆಗೆ ಯಾವ ಉಗ್ರಸಂಘಟನೆಯೂ ಹೊತ್ತುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.