ಪೇಶಾವರ: ಇಲ್ಲಿನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜೌರ್ ಬುಡುಕಟ್ಟು ಪ್ರದೇಶದಲ್ಲಿರುವ ನಿಷೇಧಿತ ಭಯೋತ್ಪಾದಕ ಸಂಘಟನೆ ತೆಹ್ರೀಕ್ –ಎ–ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ವಿರುದ್ಧ ಪಾಕಿಸ್ತಾನ ಸೇನೆ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಿದೆ.
ಸತತ ಮೂರು ದಿನ ಕಾರ್ಯಾಚರಣೆ ನಡೆಯಲಿದ್ದು, ಇದರ ಭಾಗವಾಗಿ ಈ ಪ್ರದೇಶದಿಂದ 55 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಬಜೌರ್ ಬುಡುಕಟ್ಟು ಪ್ರದೇಶವು ಅಫ್ಗಾನಿಸ್ತಾನದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಇಲ್ಲಿನ 27 ಗ್ರಾಮಗಳಲ್ಲಿ ಕೆಲವು ಕಡೆ 72 ಗಂಟೆ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ.
‘ಪರ್ಯಾಯ ಸೌಕರ್ಯ ಕಲ್ಪಿಸದೆ ಸುಮಾರು 55 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಕರ್ಫ್ಯೂ ವಿಧಿಸಿರುವುದರಿಂದ ಅಂದಾಜು 4 ಲಕ್ಷದಷ್ಟು ಜನರು ಒತ್ತೆಯಾಳುಗಳಾಗಿದ್ದಾರೆ. ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಸಿದ್ಧರಿರುವಾಗ ಸರ್ಕಾರ ಕರ್ಫ್ಯೂ ಜಾರಿಗೊಳಿಸಿದ್ದು ಯಾಕೆ ಎಂದು ಅವಾಮಿ ನ್ಯಾಷನಲ್ ಪಕ್ಷದ ಶಾಸಕ ನಿಸಾರ್ ಬಾಜ್ ಪ್ರಶ್ನಿಸಿದ್ದಾರೆ.
ಸ್ಥಳಾಂತರಗೊಂಡವರಿಗೆ ಖಾರ್ ಪ್ರಾಂತ್ಯದ 107ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.