ವಿಶ್ವಸಂಸ್ಥೆ: ಮಧ್ಯಪ್ರಾಚ್ಯದ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್ಎಸ್ಸಿ)ಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲೇ ಪಾಕಿಸ್ತಾನವು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿ ಗಮನಸೆಳೆಯುವ ಯತ್ನ ನಡೆಸಿದೆ.
ಕಾಶ್ಮೀರ ವಿಷಯದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ನಡೆಸುವ ಸಾಧ್ಯತೆಯನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ತಳ್ಳಿಹಾಕಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
‘ಪ್ಯಾಲೆಸ್ಟೀನಿನ ಕಾನೂನುಬದ್ಧ ಅಕಾಂಕ್ಷೆಗಳನ್ನು ಪಾಕಿಸ್ತಾನವೂ ಮುಂದೆಯೂ ಬೆಂಬಲಿಸಲಿದೆ. ವಿದೇಶಿಯರೂ ಆಕ್ರಮಿಸುವ ನೆಲದಲ್ಲಿ ಅಲ್ಲಿನ ಜನರೇ ನೆಲೆಸುವಂತಾಗಿದೆ, ಇದಕ್ಕೆ ಕಾಶ್ಮೀರವೂ ಒಂದು ಉದಾಹರಣೆ’ ಎಂದು ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹಾ ಲೋಧಿ ದೂರಿದರು.
‘ಅತ್ಯುನ್ನತ ಸಂಸ್ಥೆಯು ಅದರ ಜವಾಬ್ದಾರಿಗಳಿಗೆ ಬದ್ಧವಾಗಿರಬೇಕು, ಅಲ್ಲದೇ ಪ್ಯಾಲೆಸ್ಟೀನ್ ಹಾಗೂ ದೀರ್ಘಕಾಲದಿಂದ ಬಗೆಹರಿಯದೇ ಉಳಿದಿರುವ ಕಾಶ್ಮೀರದ ವಿಚಾರದಲ್ಲಿ ತಾನು ತೆಗೆದುಕೊಂಡಿರುವ ನಿರ್ಣಯಗಳಿಗೆ ಬದ್ಧವಾಗಿರಬೇಕು. ಇದರಿಂದ ವಿಶ್ವಸಂಸ್ಥೆ ಮೇಲಿನ ಸಂಪೂರ್ಣ ಭರವಸೆಯನ್ನೂ ಜನರೂ ಕಳೆದುಕೊಳ್ಳುವುದಿಲ್ಲ’ ಎಂದು ಅವರು ತಿಳಿಸಿದರು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹಾಗೂ ಸೇನೆಯಿಂದ ಹೆಚ್ಚುತ್ತಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ ಸಾಕಷ್ಟು ಸಾವು–ನೋವು ಸಂಭವಿಸಿದೆ. ಇದರಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.