ಕ್ವಾಲಾಲಂಪುರ : ಇಸ್ಲಾಂ ಧರ್ಮದ ಸೂಕ್ಷ್ಮಗಳನ್ನು ಚಿತ್ರಿಸಲಾಗಿದೆ ಎಂಬ ಕಾರಣಕ್ಕೆ, ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರಕ್ಕೆ ಮಲೇಷ್ಯಾದ ಸೆನ್ಸಾರ್ ಮಂಡಳಿಯು ನಿಷೇಧ ಹೇರಿದೆ.
‘ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮಲೇಷ್ಯಾದಲ್ಲಿ ಈ ಚಿತ್ರ ಪ್ರದರ್ಶಿಸುವುದು ಸೂಕ್ತವಲ್ಲ ಎಂದು ಮಂಡಳಿಯ ಮುಖ್ಯಸ್ಥ ಮೊಹ್ದ್ ಜಂಬೆರಿ ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟಿದ್ದಾರೆ’ ಎಂದು ‘ಫ್ರೀ ಮಲೇಷ್ಯಾ ಟುಡೆ’ ವರದಿ ಮಾಡಿದೆ.
ಸಿನಿಮಾ ವಿತರಕರು ನಿಷೇಧವನ್ನು ಪ್ರಶ್ನಿಸಿ ಚಲನಚಿತ್ರ ಮೇಲ್ಮನವಿ ಸಮಿತಿಗೆ ಅರ್ಜಿ ಸಲ್ಲಿಸಿದ್ದು, ಇಂದು (ಜ.30) ವಿಚಾರಣೆ ನಡೆಯಲಿದೆ.
ಅರ್ಜಿ ವಜಾ– (ನವದೆಹಲಿ ವರದಿ): ‘ಪದ್ಮಾವತ್’ ಚಿತ್ರದಲ್ಲಿನ ಕೆಲವು ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿಹಾಕಿದೆ. ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ಈಗಾಗಲೇ ನಿರ್ಧಾರ ಕೈಗೊಂಡಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.
ಪದ್ಮಾವತ್ಗೆ ಸಂಬಂಧಿಸಿದಂತೆ ಈ ವಕೀಲರು ಸಲ್ಲಿಸಿದ್ದ ಮೂರನೇ ಅರ್ಜಿ ಇದಾಗಿತ್ತು. ಪದ್ಮಾವತ್ ಬಿಡುಗಡೆಗೆ ನಿಷೇಧ ಹೇರುವಂತೆ ಕೋರಿ ಈ ಹಿಂದೆ ಅವರು ಸಲ್ಲಿಸಿದ್ದ ಎರಡು ಅರ್ಜಿಗಳು ಸಹ ವಜಾಗೊಂಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.