ಕಿಂಗ್ಡಾವೋ/ಚೀನಾ: ಆರು ವಾರಗಳ ಅಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಡುವೆ ಶನಿವಾರ ಎರಡನೇ ಭೇಟಿ ಮತ್ತು ದ್ವಿಪಕ್ಷೀಯ ಮಾತುಕತೆ ನಡೆಯಿತು.
ಶಾಂಘೈ ಸಹಕಾರ ಸಂಘಟನೆಯ 18ನೇ ವಾರ್ಷಿಕ ಶೃಂಗಸಭೆ(ಎಸ್ಸಿಒ)ಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಬಂದಿದ್ದಾರೆ. ಎಸ್ಸಿಒದಲ್ಲಿ ಭಾರತದ ಪ್ರಧಾನಿಯೊಬ್ಬರು ಭಾಗವಹಿಸುತ್ತಿರುವುದು ಇದೇ ಮೊದಲು.
ಒಪ್ಪಂದಕ್ಕೆ ಸಹಿ: ಬ್ರಹ್ಮಪುತ್ರ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಒಪ್ಪಂದಕ್ಕೆ ಭಾರತ ಮತ್ತು ಚೀನಾಗಳು ಸಹಿ ಹಾಕಿವೆ. ನದಿಯಲ್ಲಿ ಮೇ 15ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ಚೀನಾ ಭಾರತಕ್ಕೆ ಮಾಹಿತಿ ನೀಡಲಿದೆ. ಇದರಿಂದ ಅಸ್ಸಾಂನಲ್ಲಿ ತಲೆದೋರುವ ಪ್ರವಾಹವನ್ನು ಎದುರಿಸಲು ಭಾರತವು ಅಗತ್ಯ ಕ್ರಮ ತೆಗೆದುಕೊಳ್ಳಲು ನೆರವಾಗಲಿದೆ.
‘ಭಯೋತ್ಪಾದನೆ, ಪ್ರತ್ಯೇಕತಾವಾದ, ತೀವ್ರವಾದಗಳನ್ನು ತೊಡೆದುಹಾಕುವುದು. ಆ ಮೂಲಕ ವಾಣಿಜ್ಯ, ಕಾನೂನು, ಆರೋಗ್ಯ, ಕೃಷಿ, ಪ್ರಾದೇಶಿಕ ಸಂಪರ್ಕ, ಪರಿಸರ ಸಂರಕ್ಷಣೆ–ವಿಕೋಪ ನಿರ್ವಹಣೆ ಹಾಗೂ ಸದಸ್ಯ ರಾಷ್ಟ್ರಗಳ ಜನರ ಮಧ್ಯೆ ಸಂಬಂಧವನ್ನು ವೃದ್ಧಿಸುವ ಕಾರ್ಯಸೂಚಿಯನ್ನು ಎಸ್ಸಿಒ ಹೊಂದಿದೆ’ ಎಂದು ಪ್ರಧಾನಿ ಮೋದಿ ಭಾರತದಿಂದ ಇಲ್ಲಿಗೆ ಪ್ರಯಾಣ ಆರಂಭಿಸುವ ಮುನ್ನ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.