ನವದೆಹಲಿ: ಲಿಬಿಯಾದಲ್ಲಿ ಕಳೆದ ತಿಂಗಳು ಅಪಹರಣಕ್ಕೊಳಗಾಗಿದ್ದ 7 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ತಿಳಿಸಿದೆ.
ಅಪಹರಣಕ್ಕೊಳಗಾದ ಭಾರತೀಯರು ಆಂಧ್ರ ಪ್ರದೇಶ, ಬಿಹಾರ, ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರು. ಸೆಪ್ಟೆಂಬರ್ 14ರಂದು ಭಾರತಕ್ಕೆ ಹಿಂತಿರುಗಲು ತ್ರಿಪೋಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮಾರ್ಗದಲ್ಲಿ ಅಶ್ವೆರಿಫ್ ಪ್ರದೇಶದಲ್ಲಿ ಭಾರತೀಯರು ಅಪಹರಣಕ್ಕೊಳಗಾಗಿದ್ದರು. ಇವರೆಲ್ಲರೂ ಕಟ್ಟಡ ನಿರ್ಮಾಣ ಮತ್ತು ತೈಲ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
‘ಅಪಹರಣಕ್ಕೊಳಗಾದ ಭಾರತೀಯರನ್ನು ಅಲ್ ಶೋಲಾ ಅಲ್ ಮುಡಿಯಾ ಕಂಪನಿಗೆ ಹಸ್ತಾಂತರಿಸಲಾಗಿದ್ದು, ಅವರೊಂದಿಗೆ ಟ್ಯುನೇಷಿಯಾದಲ್ಲಿರುವ ಭಾರತೀಯ ರಾಯಭಾರಿ ಪುನೀತ್ ರಾಯ್ ಕುಂಡಾಲ್ ಮಾತನಾಡಿದ್ದಾರೆ. ಎಲ್ಲ ಭಾರತೀಯರು ಆರೋಗ್ಯವಾಗಿದ್ದು ಅವರನ್ನು ಭಾರತಕ್ಕೆ ವಾಪಸ್ ಕರೆತರುವ ಕುರಿತು ಮಾತುಕತೆ ನಡೆಸಲಾಗುತ್ತಿದೆ’ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.