
ಢಾಕಾ: ಯಾವುದೇ ರೀತಿಯ ಅಕ್ರಮ ಮತ್ತು ಭ್ರಷ್ಟಾಚಾರ ಸಾಬೀತಾದರೆ ಭಾರತದ ಅದಾನಿ ಸಮೂಹದೊಂದಿಗಿನ ವಿದ್ಯುತ್ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಹೇಳಿದೆ.
‘ಒಪ್ಪಂದದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಭಷ್ಟಾಚಾರ ನಡೆದಿರುವುದು ಸಾಬೀತಾದರೆ ಒಪ್ಪಂದವೇ ರದ್ದುಗೊಳ್ಳುವ ಸಾಧ್ಯತೆಗಳಿವೆ’ ಎಂದು ಬಾಂಗ್ಲಾದ ಇಂಧನ ವ್ಯವಹಾರಗಳ ಸಲಹೆಗಾರ ಮೊಹಮ್ಮದ್ ಫೌಝುಲ್ ಕಬೀರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಸೀನಾ ಆಡಳಿತದಲ್ಲಿ ನಡೆದಿರುವ ವಿದ್ಯುತ್ ಒಪ್ಪಂದಗಳ ಬಗ್ಗೆ ಪರಿಶೀಲನೆ ನಡೆಸಿರುವ ರಾಷ್ಟ್ರೀಯ ಪರಿಶೀಲನಾ ಸಮಿತಿಯು ಸಲ್ಲಿಸಿರುವ ಮಧ್ಯಂತರ ವರದಿಯ ಬಗ್ಗೆ ಕಬೀರ್ ಪ್ರತಿಕ್ರಿಯಿಸಿದರು.
2017ರಲ್ಲಿ ಅದಾನಿ ಸಮೂಹ ಮತ್ತು ಬಾಂಗ್ಲಾದೇಶದ ನಡುವೆ ಆಗಿದ್ದ ಒಪ್ಪಂದದ ಕುರಿತು, ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ಬಳಿಕ ಪರಿಶೀಲನೆ ನಡೆಸಲಾಗುತ್ತಿದೆ.
‘ಹಸೀನಾ ಆಡಳಿತಾವಧಿಯಲ್ಲಿ ಇಂಧನ ವಲಯದಲ್ಲಿ ಸರ್ಕಾರದ ವೈಫಲ್ಯ ಮತ್ತು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ’ ಎಂದು ಸಮಿತಿಯ ಮುಖ್ಯಸ್ಥರು ತಿಳಿಸಿದ್ದಾರೆ. ಸಮಿತಿಯು ಅಂತಿಮ ವರದಿಯನ್ನು 2026ರ ಜನವರಿಯಲ್ಲಿ ನೀಡುವ ಸಾಧ್ಯತೆಯಿದೆ.
ಅದಾನಿ ಸಮೂಹದ ಜೊತೆಗಿನ ವಿದ್ಯುತ್ ಖರೀದಿ ಒಪ್ಪಂದದ ಬಗ್ಗೆ ಪ್ರತ್ಯೇಕ ವರದಿ ತಯಾರಿಸಿರುವುದಾಗಿ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.