ವಿಶ್ವಸಂಸ್ಥೆ: ಜೈವಿಕ ಮತ್ತು ಅಣು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಯಾವುದೇ ವಿಷಯವು ಸಂಬಂಧಿತ ಭಾಗಿದಾರ ದೇಶಗಳ ಜತೆ ಸಮಾಲೋಚನೆ ಮತ್ತು ಸಹಕಾರದಲ್ಲಿಯೇ ಇತ್ಯರ್ಥವಾಗಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಪ್ರತಿಪಾದಿಸಿದೆ.
ಯುದ್ಧ ಬಾಧಿತ ಉಕ್ರೇನ್ನಲ್ಲಿ ಇರುವ ಜೈವಿಕ ಪ್ರಯೋಗಾಲಯ ಕುರಿತ ವಿಷಯ ಚರ್ಚೆಗೆ ಬಂದಾಗ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತು. ಅಮೆರಿಕ ನೆರವಿನಲ್ಲಿ ಉಕ್ರೇನ್ ರಾಸಾಯನಿಕ, ಜೈವಿಕ ಪ್ರಯೋಗಾಲಯಗಳನ್ನು ನಿರ್ವಹಿಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಅಮೆರಿಕ ಈ ಆರೋಪ ನಿರಾಕರಿಸಿದ ಬೆನ್ನಲ್ಲೇ, ರಷ್ಯಾ ಸಭೆಗೆ ಆಗ್ರಹಪಡಿಸಿತ್ತು.
‘ಉಕ್ರೇನ್ನ ಬೆಳವಣಿಗೆ ಕುರಿತಂತೆ ನಾವು ಆತಂಕ ವ್ಯಕ್ತಪಡಿಸಿದ್ದೇವೆ. ಜೈವಿಕ ಪ್ರಯೋಗಾಲಯದ ಚಟುವಟಿಕೆ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಇತ್ತೀಚೆಗೆ ನೀಡಿರುವ ಹೇಳಿಕೆಗಳನ್ನು ಭಾರತ ಗಮನಿಸಿದೆ’ ಎಂದು ವಿಶ್ವಸಂಸ್ಥೆಯ ಭಾರತ ರಾಯಭಾರ ಕಚೇರಿಯ ಶಾಶ್ವತ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದರು.
ಜೈವಿಕ ಮತ್ತು ಅಣುಶಸ್ತ್ರಾಸ್ತ್ರ ಸಮಾವೇಶದಲ್ಲಿ (ಬಿಟಿಡಬ್ಲ್ಯೂಸಿ) ಭಾರತ ತನ್ನ ನಿಲುವನ್ನು ಪುನರುಚ್ಚರಿಸಲಿದೆ. ಬಿಟಿಡಬ್ಲ್ಯೂಸಿ ನಿರ್ಣಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಉಕ್ರೇನ್ ಮೇಲಿನ ದಾಳಿ ಕುರಿತು ವಿವರಿಸಿದ ವಿಶ್ವಸಂಸ್ಥೆಯ ರಾಜಕೀಯ ಮತ್ತು ಶಾಂತಿ ಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಸ್ಮೇರಿ ಡಿಕಾರ್ಲೊ ಅವರು, ‘ಉಕ್ರೇನ್ನ ಮರಿಯುಪೋಲ್, ಹಾರ್ಕಿವ್, ಸುಮಿ ಮತ್ತು ಚೆರ್ನಿವ್ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ವಸತಿ ಪ್ರದೇಶ, ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿದೆ’ ಎಂದರು.
ಇಂಧನ ದರ ಏರಿಕೆ: ಎಚ್ಚರಿಕೆ
ಉಕ್ರೇನ್ ಮೇಲಿನ ದಾಳಿಯಿಂದಾಗಿ ರಷ್ಯಾದ ಮೇಲೆ ವಿವಿಧ ದೇಶಗಳು ಹೇರಿರುವ ನಿರ್ಬಂಧದ ಕಾರಣ ಇಂಧನ ದರ ತೀವ್ರಗತಿಯಲ್ಲಿ ಏರಿಕೆಯಾಗಬಹುದು ಎಂದು ರಷ್ಯಾವು ಯುರೋಪ್ ರಾಷ್ಟ್ರಗಳಿಗೆ ಎಚ್ಚರಿಸಿದೆ.
ರಷ್ಯಾದ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿ ನಿಕೊಲಾಯ್ ಕೊಬ್ರಿನೆಟ್ಸ್ ಅವರು, ಇಂಧನ ಪೂರೈಕೆಯಲ್ಲಿ ರಷ್ಯಾ ಸ್ವಾವಲಂಬಿಯಾಗಿದೆ. ಆದರೆ, ಅಗತ್ಯ ಬಿದ್ದರೆ ಈ ಕ್ಷೇತ್ರದಲ್ಲಿ ಸಂಘರ್ಷಕ್ಕೆ ಸಿದ್ಧ ಎಂದರು. ಆದರೆ, ಎದುರಾಗಬಹುದಾದ ಸಂಘರ್ಷದ ಸ್ವರೂಪ ಕುರಿತಂತೆ ಅವರು ವಿವರಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.