ADVERTISEMENT

ಗಡುವು ವಿಸ್ತರಿಸಲ್ಲ: ಗುಡುಗಿದ ತಾಲಿಬಾನ್‌

ರಾಯಿಟರ್ಸ್
Published 24 ಆಗಸ್ಟ್ 2021, 22:30 IST
Last Updated 24 ಆಗಸ್ಟ್ 2021, 22:30 IST
ಅಫ್ಗಾನಿಸ್ತಾನದಿಂದ ತಂದ ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್‌ ಅನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಿಖ್‌ ಸಮುದಾಯದವರು ಸ್ವೀಕರಿಸಿದರು –ಪಿಟಿಐ ಚಿತ್ರ
ಅಫ್ಗಾನಿಸ್ತಾನದಿಂದ ತಂದ ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್‌ ಅನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಿಖ್‌ ಸಮುದಾಯದವರು ಸ್ವೀಕರಿಸಿದರು –ಪಿಟಿಐ ಚಿತ್ರ   

ಕಾಬೂಲ್: ಎಲ್ಲ ವಿದೇಶಿಯರು ಇದೇ 31ರೊಳಗೆ ದೇಶ ತೊರೆಯಬೇಕು. ದೇಶ ಬಿಟ್ಟು ಹೋಗಲು ನೀಡಲಾದ 31ರ ಗಡುವನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್‌ ಮಂಗಳವಾರ ಮತ್ತೆ ಗುಡುಗಿದೆ. ಜಿ–7 ದೇಶಗಳ ಮುಖಂಡರು ಸಭೆ ಸೇರಿ ಗಡುವು ವಿಸ್ತರಿಸಲು ಕೋರುವ ಚಿಂತನೆ ನಡೆಸಿದ್ದಾರೆ. ಆದರೆ, ಈ ಮನವಿಗೆ ಮನ್ನಣೆ ಸಿಗುವ ಸಾಧ್ಯತೆ ಇಲ್ಲ.

ಕಳೆದ 10 ದಿನಗಳಲ್ಲಿ ಸುಮಾರು 60 ಸಾವಿರ ಜನರನ್ನು ತೆರವು ಮಾಡಲಾಗಿದೆ. ಇನ್ನೂ ದೊಡ್ಡ ಸಂಖ್ಯೆಯ ಜನರು ಅಫ್ಗಾನಿಸ್ತಾನದಲ್ಲಿ ಉಳಿದಿದ್ದಾರೆ. ತೆರವಿನ ಗಡುವು ವಿಸ್ತರಣೆ ಆಗುವ ಸಾಧ್ಯತೆ ಸಂಪೂರ್ಣ ಮಸುಕಾಗಿದೆ. ಹಾಗಾಗಿ, ತೆರವು ಕಾರ್ಯಾಚರಣೆ ಬಿರುಸು ಪಡೆದಿದೆ.

‘ಗಡುವಿನೊಳಗೆ ಎಲ್ಲರನ್ನೂ ತೆರವು ಮಾಡುವುದಕ್ಕಾಗಿ ವಿದೇಶಿ ಪಡೆಗಳ ಪ್ರತಿಯೊಬ್ಬ ಸದಸ್ಯನೂ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾನೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಗಡುವಿನ ಬಳಿಕವೂ ಅಮೆರಿಕದ ಸೇನೆಯು ಅಫ್ಗಾನಿಸ್ತಾನದಲ್ಲಿ ಇರಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಹೇಳಿದ್ದಾರೆ. ತೆರವು ಕಾರ್ಯಾಚರಣೆ ಅತ್ಯಂತ ಕ್ಲಿಷ್ಟಕರ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ಇರುವ ಅಮೆರಿಕನ್ನರ ಸಂಖ್ಯೆ ಅತ್ಯಂತ ಹೆಚ್ಚು. ಹಾಗಾಗಿ, ಗಡುವಿನೊಳಗೆ ಎಲ್ಲರ ತೆರವು ಸಾಧ್ಯವಿಲ್ಲ’ ಎಂದು ಅಮೆರಿಕದ ಜನಪ್ರತಿನಿಧಿ ಸಭೆಯ ಗುಪ್ತಚರ ಸಮಿತಿಯ ಅಧ್ಯಕ್ಷ ಆ್ಯಡಂ ಶಿಫ್‌ ಹೇಳಿದ್ದಾರೆ.

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಮುಂದುವರಿದಿದೆ. ದೇಶ ತೊರೆಯುವ ಧಾವಂತ ಹೆಚ್ಚಿದೆ. ಆದರೆ, ಜನರು ಭಯಪಡುವ ಅಗತ್ಯ ಇಲ್ಲ. ಎಲ್ಲರ ಸುರಕ್ಷತೆಯ ಖಾತರಿ ನೀಡಲಾಗುವುದು ಎಂದ ತಾಲಿಬಾನ್‌ ವಕ್ತಾರ ಝಬೀವುಲ್ಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.