ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರದಿಂದ 5 ದಿನಗಳ ಕಾಲ ಭಾರತದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ನೇತೃತ್ವದಲ್ಲಿ ಹಿರಿಯ ಸೇನಾಧಿಕಾರಿಗಳ ಸಮಾವೇಶ ನಡೆಯಲಿದೆ.
ಈ ಸಮಾವೇಶದಲ್ಲಿಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಭಾರತದ ರಾಷ್ಟ್ರೀಯ ಭದ್ರತೆಗೆ ಎದುರಾಗುವ ಸವಾಲುಗಳು ಮತ್ತುರಷ್ಯಾ-ಉಕ್ರೇನ್ ನಡುವಿನ ಯುದ್ಧವು ಭಾರತದ ಮೇಲೆ ಬೀರಬಹುದಾದ ಸಾಧ್ಯತೆಗಳ ಬಗ್ಗೆ ಸೇನೆಯ ಹಿರಿಯ ಕಮಾಂಡರ್ಗಳು ಪರಿಶೀಲನೆ ನಡೆಸಲಿದ್ದಾರೆ.
ಚೀನಾದ ಜೊತೆಗಿನ 3400 ಕಿ.ಮೀ ಉದ್ದದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಭದ್ರತೆ, ಕಾಶ್ಮೀರದಲ್ಲಿನ ಉಗ್ರ ನಿಗ್ರಹ ಕಾರ್ಯಾಚರಣೆ ಹಾಗೂ ಕೇಂದ್ರಾಡಳಿತ ಪ್ರದೇಶ(ಕಾಶ್ಮೀರ)ದ ಒಟ್ಟಾರೆ ಭದ್ರತೆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏಪ್ರಿಲ್ 21ರಂದು ಸೇನಾಧಿಕಾರಿಗಳ ಸಮಾವೇಶದಲ್ಲಿ ಭಾಗಿಯಾಗಿ ಹಿರಿಯ ಕಮಾಂಡರ್ಗಳ ಜೊತೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ.
ಅಲ್ಲದೆ 13 ಲಕ್ಷ ಬಲಿಷ್ಠ ಸೇನಾ ಪಡೆಯ ಕಾರ್ಯಾಚರಣೆಯ ಸಿದ್ಧತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕಮಾಂಡರ್ಗಳು ಚಿತ್ತ ಹರಿಸಲಿದ್ದಾರೆ. ಸೇನಾ ಕಮಾಂಡರ್ಗಳ ಸಮಾವೇಶವು ಉನ್ನತ ಹಂತದ ಸಮಾವೇಶವಾಗಿದ್ದು, ಪ್ರತಿ ವರ್ಷ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.