ಕಾಬೂಲ್: ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್ನ ಉತ್ತರ ಭಾಗದಲ್ಲಿರುವ ಪಂಜ್ಶಿರ್ ಕಣಿವೆಯಲ್ಲಿ ಸೋಮವಾರ ರಾತ್ರಿ ತಾಲಿಬಾನ್ ಹಾಗೂ ಅದರ ವಿರೋಧಿ ಪಡೆ ನಡುವೆ ನಡೆದ ಕದನದಲ್ಲಿ ಎಂಟು ಮಂದಿ ತಾಲಿಬಾನ್ ಉಗ್ರರು ಹತರಾಗಿದ್ದಾರೆ.
ಅಫ್ಗಾನಿಸ್ತಾನದ ಬಹುತೇಕ ಎಲ್ಲ ಪ್ರದೇಶಗಳನ್ನೂ ವಶಕ್ಕೆ ಪಡೆದಿರುವ ತಾಲಿಬಾನ್ಗೆ, ಪಂಜ್ಶಿರ್ ಕಣಿವೆಯನ್ನು ವಶಪಡಿಸಿಕೊಳ್ಳುವುದು ಆಗಿಲ್ಲ. ಪಂಜ್ಶಿರ್, ಯಾವುದೇ ಕಾರಣಕ್ಕೂ ತಾಲಿಬಾನ್ ಕೈವಶವಾಗದಂತೆ ನೋಡಿಕೊಳ್ಳಲು ಕಣಿವೆಯ ಸ್ಥಳೀಯ ಯೋಧರು ತಾಲಿಬಾನ್ ಜತೆ ಸೆಣಸಾಟಕ್ಕೆ ನಿಂತಿದ್ದಾರೆ.
ಪಂಜಶಿರ್ನ ಸ್ಥಳೀಯ ನಾಯಕ ಅಹಮ್ಮದ್ ಮಸೂದ್ಗೆ ನಿಷ್ಠವಾದ ರಾಷ್ಟ್ರೀಯ ಪ್ರತಿರೋಧ ಪಡೆಯ (ಎನ್ಆರ್ಎಫ್) ವಕ್ತಾರ ಫಾಹಿಂ ದಾಸ್ತಿ, ‘ತಾಲಿಬಾನ್ ಉಗ್ರರು, ಸೋಮವಾರ ರಾತ್ರಿ ಕಣಿವೆಯ ಪಶ್ಚಿಮ ದ್ವಾರದ ಮೂಲಕ ಎನ್ಆರ್ಎಫ್ ನೆಲೆಗಳ ಮೇಲೆ ದಾಳಿ ಮಾಡಿದರು. ಆ ಸಂಘರ್ಷದಲ್ಲಿ ಎಂಟು ಮಂದಿ ಉಗ್ರರು ಹತರಾಗಿದ್ದು, ಅಷ್ಟೇ ಜನ ಗಾಯಗೊಂಡಿದ್ದಾರೆ. ಎನ್ಆರ್ಎಫ್ನ ಇಬ್ಬರು ಸಿಬ್ಬಂದಿಯೂ ಗಾಯಗೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಕಣಿವೆಯಲ್ಲಿನ ರಕ್ಷಣಾ ಸಾಮರ್ಥ್ಯದ ಪರೀಕ್ಷಾರ್ಥವಾಗಿ ಈ ದಾಳಿ ನಡೆಸಿರಬಹುದು ಎಂದಿರುವ ದಾಸ್ತಿ, ಉಗ್ರರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಈ ಬಗ್ಗೆ ತಾಲಿಬಾನ್ ವಕ್ತಾರರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಪಂಜ್ಶಿರ್ನ ಸ್ಥಳೀಯ ನಾಯಕ ಅಹಮ್ಮದ್ ಮಸೂದ್, ಈ ಕಣಿವೆಯಲ್ಲಿ ಸಾವಿರಾರು ಸ್ಥಳೀಯ ಯೋಧರನ್ನು ಸಜ್ಜುಗೊಳಿಸಿ ಕಣಿವೆಯನ್ನು ಕಾಯಲು ರಕ್ಷಣಾಪಡೆಯನ್ನು ಕಟ್ಟಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.