ಢಾಕಾ: ತ್ರಿಪುರಾದಲ್ಲಿರುವ ಬಾಂಗ್ಲಾದೇಶ ರಾಯಭಾರ ಕಚೇರಿ ಮೇಲೆ ದಾಳಿ ನಡೆದ ಬೆನ್ನಲ್ಲೇ, ಬಾಂಗ್ಲಾದೇಶ ವಿದೇಶಾಂಗ ಇಲಾಖೆಯು ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಕರೆಸಿಕೊಂಡು ತೀವ್ರವಾದ ಪ್ರತಿಭಟನೆಯನ್ನು ದಾಖಲಿಸಿದೆ.
‘ವರ್ಮಾ ಅವರು ಬಂದ ವೇಳೆ ನಮ್ಮ ಕಳವಳವನ್ನು ಅವರ ಮುಂದೆ ತಿಳಿಸಿದ್ದೇವೆ’ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಅಗರ್ತಲಾದಲ್ಲಿನ ಬಾಂಗ್ಲಾದೇಶದ ರಾಯಭಾರಿ ಕಚೇರಿ ಮೇಲೆ ದಾಳಿ ನಡೆದ ಬಳಿಕ ವಿದೇಶಾಂಗ ಇಲಾಖೆ ಕಚೇರಿಗೆ ಬರುವಂತೆ ಭಾರತದ ರಾಯಭಾರಿಗೆ ಸೂಚಿಸಲಾಗಿತ್ತು ಎಂದು ಇಲಾಖೆಯ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್ ತಿಳಿಸಿದರು.
‘ಬಾಂಗ್ಲಾದೇಶದ ಜೊತೆಗೆ ದೆಹಲಿಯು ‘ನಿರಂತರ ಹಾಗೂ ರಚನಾತ್ಮಕ ಸಂಬಂಧ’ವನ್ನು ಎದುರುನೋಡುತ್ತಿದ್ದು, ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ ಯಾವುದೇ ಒಂದು ವಿಚಾರ ಮಾತ್ರ ಮುಖ್ಯವಾಗಬಾರದು’ ಎಂದು ವರ್ಮಾ ಈ ವೇಳೆ ತಿಳಿಸಿದರು.
‘ನಾವು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಜೊತೆಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ವರ್ಮಾ ತಿಳಿಸಿದರು’ ಎಂದು ಸಭೆಯ ಬಳಿಕ ಹಂಗಾಮಿ ವಿದೇಶಾಂಗ ಕಾರ್ಯದರ್ಶಿ ರಿಯಾಜ್ ಹಮೀದುಲ್ಲಾ ತಿಳಿಸಿದರು.
‘ಎರಡು ರಾಷ್ಟ್ರಗಳ ಸಂಬಂಧವು ಬಹು ಆಯಾಮದ್ದು ಹಾಗೂ ವ್ಯಾಪಕವಾದುದು. ಒಂದೇ ವಿಚಾರಕ್ಕೆ ಅಂಟಿ ಕೂರುವುದಿಲ್ಲ. ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿ ನಿಟ್ಟಿನಲ್ಲಿ ಬಾಂಗ್ಲಾದೇಶದ ಜೊತೆಗೂಡಿ ಕೆಲಸ ಮಾಡಲು ಭಾರತ ಉತ್ಸುಕವಾಗಿದೆ’ ಎಂದು ವರ್ಮಾ ಅವರು ಬಾಂಗ್ಲಾದೇಶಕ್ಕೆ ಸ್ಪಷ್ಟಪಡಿಸಿದರು.
ಹಿಂದೂ ಸಂಘಟನೆಯ ಮುಖಂಡ, ಚಿನ್ಮಯಿ ಕೃಷ್ಣದಾಸ್ ಬಂಧನ ಖಂಡಿಸಿ ಜನರ ಗುಂಪೊಂದು ತ್ರಿಪುರಾದ ಅಗರ್ತಲಾದಲ್ಲಿರುವ ಬಾಂಗ್ಲಾದೇಶ ಕಾನ್ಸುಲೇಟ್ನ ಸಹಾಯಕ ಹೈ ಕಮಿಷನ್ ವಿರುದ್ಧ ವಾಗ್ದಾಳಿ ನಡೆಸಿ, ಆವರಣದ ಒಳಗೆ ಪ್ರವೇಶಿಸಲು ಯತ್ನಿಸಿತ್ತು. ಈ ಘಟನೆಗೆ ಭಾರತವು ‘ತೀವ್ರ ವಿಷಾದ’ ವ್ಯಕ್ತಪಡಿಸಿದೆ.
‘ಭಾರತದ ವೈಫಲ್ಯ’: ಅಗರ್ತಲಾದ ಅಸಿಸ್ಟೆಂಟ್ ಹೈಕಮಿಷನ್ ಕಚೇರಿ ಮೇಲಿನ ದಾಳಿಯು ‘ಭಾರತದ ವೈಫಲ್ಯ’ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪ್ರಭಾವಿ ಸಲಹೆಗಾರ ಆಸಿಫ್ ನಜ್ರುಲ್ ಅವರು ಮಂಗಳವಾರ ಹೇಳಿದ್ದಾರೆ.
‘ಸ್ನೇಹವು ಸಮಾನತೆ ಮತ್ತು ಪರಸ್ಪರ ಗೌರವ ಆಧರಿಸಿದೆ ಎಂದು ನಂಬಿದ್ದೇವೆ. ಶೇಖ್ ಹಸೀನಾ ಅವರ ಸರ್ಕಾರವು ಚುನಾವಣೆ ಇಲ್ಲದೆ ಅಧಿಕಾರ ಪಡೆಯಲು ಭಾರತದ ಪರವಾದ ನೀತಿಯನ್ನು ಅನುಸರಿಸುತ್ತಿತ್ತು. ಇದು ಹಸೀನಾ ಅವರ ಬಾಂಗ್ಲಾದೇಶ ಅಲ್ಲ ಎಂಬುದನ್ನು ಭಾರತ ಮೊದಲು ಅರ್ಥ ಮಾಡಿಕೊಳ್ಳಬೇಕು’ ಎಂದು ಕಾನೂನು ಸಚಿವಾಲಯದ ಸಲಹೆಗಾರರೂ ಆಗಿರುವ ಆಸಿಫ್ ನಜ್ರುಲ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಟಿ.ವಿ ವಾಹಿನಿಗಳ ನಿಷೇಧ ಕೋರಿ ಅರ್ಜಿ: ಭಾರತದ ಟಿ.ವಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸಬೇಕು ಎಂದು ಕೋರಿ ಬಾಂಗ್ಲಾದೇಶದ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಭಾರತದ ಟಿ.ವಿ ವಾಹಿನಿಗಳಲ್ಲಿ ಪ್ರಚೋದನಾತ್ಮಕ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಆರೋಪಿಸಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಕೀಲ ಇಖ್ಲಾಸ್ ಉದ್ದೀನ್ ಭುಯಿಯಾಂ ಅವರು ಅರ್ಜಿ ಸಲ್ಲಿಸಿದ್ದು, ಸೋಮವಾರ ಈ ವಿಷಯವನ್ನು ದೃಢಪಡಿಸಿದ್ದಾರೆ ಎಂದು ‘ದಿ ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ.
ವಕೀಲರ ಮೇಲೆ ಹಲ್ಲೆ–ಆರೋಪ
‘ವಕೀಲ ರಮಣ ರಾಯ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿನ್ಮಯಿ ಕೃಷ್ಣದಾಸ್ ಪರವಾಗಿ ವಾದ ಮಂಡಿಸಲು ಮುಂದಾಗಿದ್ದೇ ಅವರು ಮಾಡಿದ ತಪ್ಪು’ ಎಂದು ಇಸ್ಕಾನ್ನ ಕೋಲ್ಕತ್ತ ಶಾಖೆಯ ವಕ್ತಾರ ರಾಧಾರಮಣ ದಾಸ್ ಅವರು ಸೋಮವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಚಿನ್ಮಯಿ ಕೃಷ್ಣದಾಸ್ ಪರವಾಗಿ ವಾದ ಮಂಡಿಸದೇ ಇರಲೆಂದೇ ಸುಮಾರು 70 ವಕೀಲರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ‘ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ್ ಜೋತ್’ ಆರೋಪಿಸಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.