ADVERTISEMENT

ಬೈರೂತ್‌ ಸ್ಫೋಟ: ಹಲವು ಬಾರಿ ಎಚ್ಚರಿಸಿದ್ದ ಇಲಾಖೆಗಳು

ದಾಖಲೆಗಳಿಂದ ಬಹಿರಂಗವಾದ ಸರ್ಕಾರದ ’ಅವ್ಯವಸ್ಥೆ ಆಡಳಿತ’

ಏಜೆನ್ಸೀಸ್
Published 8 ಆಗಸ್ಟ್ 2020, 6:12 IST
Last Updated 8 ಆಗಸ್ಟ್ 2020, 6:12 IST
ಬೈರೂತ್ ಸ್ಫೋಟದಲ್ಲಿ ನಾಶವಾಗಿರುವ ಕಟ್ಟಡಗಳ ಅವಶೇಷಗಳನ್ನು ತೆಗೆಯುತ್ತಿರುವ ದೃಶ್ಯ
ಬೈರೂತ್ ಸ್ಫೋಟದಲ್ಲಿ ನಾಶವಾಗಿರುವ ಕಟ್ಟಡಗಳ ಅವಶೇಷಗಳನ್ನು ತೆಗೆಯುತ್ತಿರುವ ದೃಶ್ಯ   

ಬೈರೂತ್: ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಇಲ್ಲಿನ ಬಂದರುದಲ್ಲಿರುವ ಗೋದಾಮಿನಲ್ಲಿ ಸ್ಪೋಟಕ ರಾಸಾಯನಿಕಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಲೆಬನಾನ್‌ನ ಪ್ರಮುಖ ಇಲಾಖೆಗಳು, ಸಂಸ್ಥೆಗಳು ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಹತ್ತು ಬಾರಿ ಎಚ್ಚರಿಕೆ ನೀಡಿದ್ದವು ಎಂಬ ವಿಷಯ ದಾಖಲೆಗಳಿಂದ ಬೆಳಕಿಗೆ ಬಂದಿದೆ.

ಲೆಬನಾನ್‌ ಕಸ್ಟಮ್ಸ್‌ ಅಧಿಕಾರಿಗಳು, ಸೇನಾ ವಿಭಾಗದವರು, ರಕ್ಷಣಾ ಸಂಸ್ಥೆಗಳು ಮತ್ತು ನ್ಯಾಯಾಂಗ ವಿಭಾಗದವರು ಈ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿರುವುದಾಗಿ ಲಭ್ಯವಾಗಿರುವ ದಾಖಲೆಗಳಿಂದ ಬಹಿರಂಗಗೊಂಡಿದೆ.

ಇಷ್ಟೆಲ್ಲ ಎಚ್ಚರಿಕೆಗಳ ನಡುವೆಯೂ ಬಂದರಿನ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ದಾಸ್ತಾನಾಗಿದ್ದ 2750 ಟನ್‌ ಅಮೋನಿಯಂ ನೈಟ್ರೇಟ್‌ ಸ್ಫೋಟಗೊಂಡು, ನೂರಾರು ಮಂದಿ ಸಾವಿಗೀಡಾಗಲು ಕಾರಣವಾಯಿತು.

ADVERTISEMENT

ಹಿಂದಿನ ಅಧ್ಯಕ್ಷರು ಹಾಗೂ ಹಲವು ಅಧಿಕಾರಿಗಳು ಈ ರಾಸಾಯನಿಕ ಸ್ಫೋಟಕದ ಅಪಾಯದ ಬಗ್ಗೆ ಎಚ್ಚರಿಸಿದ್ದರು. ಕ್ರಮ ಕೈಗೊಳ್ಳವಂತೆಯೂ ಸಲಹೆ ನೀಡಿದ್ದರು. ಆದರೆ, ಬಂದರು ಅಧಿಕಾರಿಗಳು ಇಂಥ ಯಾವುದೇ ಸಲಹೆಯನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯವಹಿಸಿದ್ದರು. ಇದೇ ಸ್ಫೋಟ ಸಂಭವಿಸಲು ಕಾರಣ ಎಂದು ತಿಳಿದುಬಂದಿದೆ.

ಬೈರೂತ್ ಸ್ಫೋಟ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ದಾಖಲೆಗಳ ಪ್ರಕಾರ ಲೆಬನಾನ್‌ನ ದೀರ್ಘಕಾಲ ಆಡಳಿತ ನಡೆಸಿದ ಸರ್ಕಾರಗಳ ಭ್ರಷ್ಟಾಚಾರ, ಅಸಮರ್ಥ ಕಾರ್ಯವೈಖರಿಯನ್ನು ಒತ್ತಿ ಹೇಳುತ್ತಿವೆ. ಭದ್ರತೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಈ ಸರ್ಕಾರಗಳು ವಿಫಲವಾಗಿವೆ ಎಂಬುದನ್ನು ಸಾಕ್ಷ್ಯೀಕರಿಸುತ್ತಿವೆ.

ಸ್ಫೋಟದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಬೈರೂತ್ ಬಂದರ್‌ನ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈವರೆಗೆ 16 ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.