ಇಸ್ಲಾಮಾಬಾದ್: ಎರಡು ದೇಶಗಳ ಸಂಬಂಧವು ಧಾರ್ಮಿಕ ಸಂವೇದನೆಗಳನ್ನು ಮೀರಿದ್ದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮದ್ ಖುರೇಷಿ ಹೇಳಿದ್ದಾರೆ.
ಮೋದಿ ಅವರಿಗೆ ಯುಎಇ ‘ಆರ್ಡರ್ ಆಫ್ ಝಾಯೇದ್’ ಪುರಸ್ಕಾರ ನೀಡಿರುವ ಮರುದಿನ ಅಂದರೆ ಭಾನುವಾರ ಯುಎಇಗೆ ಅಧಿಕೃತ ಭೇಟಿಗಾಗಿ ತೆರಳಬೇಕಿದ್ದ ಪಾಕಿಸ್ತಾನದ ಸೆನೆಟ್ ಅಧ್ಯಕ್ಷ ಸಾದಿಕ್ ಸಂಜ್ರಾನಿ ಅವರು ತಮ್ಮ ಪ್ರಯಾಣವನ್ನು ರದ್ದುಪಡಿಸಿದ ಬೆನ್ನಲ್ಲೇ ಖುರೇಷಿ ಹೇಳಿಕೆ ನೀಡಿದ್ದಾರೆ. ಸಂಜ್ರಾನಿ ಅವರು ಇದೇ 25ರಿಂದ 28ರವರೆಗೆ ಸಂಸದೀಯ ನಿಯೋಗದೊಂದಿಗೆ ಯುಎಇಗೆ ಭೇಟಿ ನೀಡಬೇಕಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಬಳಿಕ ಪಾಕಿಸ್ತಾನವು ಕಾಶ್ಮೀರದ ಜನರನ್ನು ಬೆಂಬಲಿಸುತ್ತಿರುವುದರಿಂದ ಸಂಜ್ರಾನಿ ಈ ಭೇಟಿಯನ್ನು ರದ್ದು ಪಡಿಸಿದ್ದಾರೆ.
ಎರಡು ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಗೆ ಮೋದಿ ಶ್ರಮಿಸಿರುವುದನ್ನು ಗುರುತಿಸಿ ನೀಡಿದ ಪ್ರಶಸ್ತಿ ಕುರಿತು ಮಾತನಾಡಿದ ಖುರೇಷಿ, ‘ಯುಎಇ ಆಗಲೀ ಅಥವಾ ಇನ್ಯಾವುದೇ ದೇಶವಾಗಲೀ, ಮತ್ತೊಂದು ದೇಶದೊಡನೆ ಉತ್ತಮ ಬಾಂಧವ್ಯ ವೃದ್ಧಿಸುವ ಎಲ್ಲ ಹಕ್ಕುಗಳನ್ನು ಹೊಂದಿದೆ’ ಎಂದು ಹೇಳಿರುವುದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.