ADVERTISEMENT

ಬಿನ್ ಲಾಡೆನ್‌ ಸತ್ತಿದ್ದಾನೆ, ಗುಜರಾತ್‌ ಕಟುಕ ಬದುಕಿದ್ದಾನೆ: ಪಾಕ್ ಸಚಿವನ ಹೇಳಿಕೆ

ಏಜೆನ್ಸೀಸ್
Published 16 ಡಿಸೆಂಬರ್ 2022, 15:57 IST
Last Updated 16 ಡಿಸೆಂಬರ್ 2022, 15:57 IST
ಪ್ರಧಾನಿ ಶಹಾಬಾಜ್‌ ಷರೀಪ್‌ ಅವರೊಂದಿಗೆ ಬಿಲಾವಲ್‌ ಭುಟ್ಟೊ
ಪ್ರಧಾನಿ ಶಹಾಬಾಜ್‌ ಷರೀಪ್‌ ಅವರೊಂದಿಗೆ ಬಿಲಾವಲ್‌ ಭುಟ್ಟೊ    

ನ್ಯೂಯಾರ್ಕ್‌: ಪಾಕಿಸ್ತಾನವು 'ಭಯೋತ್ಪಾದನೆಯ ಕೇಂದ್ರ'ವಾಗಿದೆ ಎಂಬ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ಜರ್ದಾರಿ, ಭಾರತದ ಪ್ರಧಾನಿಯನ್ನು 'ಗುಜರಾತ್ ಕಟುಕ' ಎಂದು ಕರೆದಿದ್ದಾರೆ.

2008ರ ಮುಂಬೈ ದಾಳಿ ಸೇರಿದಂತೆ, ಭಾರತದಲ್ಲಿ ದಾಳಿ ನಡೆಸುವ ಉಗ್ರಗಾಮಿಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಭಾರತ ಈ ವರೆಗೆ ಆರೋಪಿಸುತ್ತಲೇ ಬಂದಿದೆ. ಇದೇ ವಿಚಾರವನ್ನೇ ವಿಶ್ವಸಂಸ್ಥೆ ಸಭೆಗೂ ಮುನ್ನ ಗುರುವಾರ ಪುನರುಚ್ಚರಿಸಿದ್ದ ಎಸ್ ಜೈಶಂಕರ್, ಪಾಕಿಸ್ತಾನವನ್ನು 'ಭಯೋತ್ಪಾದನೆಯ ಕೇಂದ್ರ' ಎಂದು ಕರೆದಿದ್ದರು.

ಇದಕ್ಕೆ ಪ್ರತಿಯಾಗಿ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ, ‘ಮುಸ್ಲಿಮರು ಮತ್ತು ಭಯೋತ್ಪಾದಕರು ಇಬ್ಬರೂ ಒಂದೇ ಎಂದು ಬಿಂಬಿಸಲು ಭಾರತ ಪ್ರಯತ್ನಿಸುತ್ತಿದೆ. ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಗುಜರಾತ್‌ನ ಕಟುಕ ಬದುಕಿದ್ದಾನೆ. ಆತ ಭಾರತದ ಪ್ರಧಾನ ಮಂತ್ರಿ’ ಎಂದು ಬಿಲಾವಲ್‌ ಹೇಳಿದ್ದಾರೆ.

ADVERTISEMENT

ಗುಜರಾತ್‌ನಲ್ಲಿ 2002ರಲ್ಲಿ ಮತೀಯ ಗಲಭೆಗಳು ನಡೆದು 1,000 ಕ್ಕೂ ಹೆಚ್ಚು ಜನರು ಬಲಿಯಾದಾಗ ಭಾರತದ ಹಿಂದೂ ರಾಷ್ಟ್ರೀಯವಾದಿ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಮುಖ್ಯಮಂತ್ರಿಯಾಗಿದ್ದರು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

‘ಭಯೋತ್ಪಾದನೆಗೆ ತನ್ನ ದೇಶವು ಹೆಚ್ಚು ಜೀವಗಳನ್ನು ಕಳೆದುಕೊಂಡಿದೆ. 2007ರಲ್ಲಿ ನಡೆದ ಆತ್ಮಹತ್ಯಾ ಬಾಂಬ್‌ ಸ್ಫೋಟದಲ್ಲಿ ನನ್ನ ತಾಯಿ ಬೆನಜೀರ್ ಭುಟ್ಟೊ ಬಲಿಯಾಗಿದ್ದಾರೆ. ಹೀಗಾಗಿ ನಾನೂ ಕೂಡ ಅದರ ಸಂತ್ರಸ್ತ’ ಎಂದು ಅವರು ಹೇಳಿದರು.

‘ನಮ್ಮ ಜನ ಇದರಿಂದ ಏಕೆ ನರಳಬೇಕು. ಖಂಡಿತವಾಗಿಯೂ ನರಳಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.