ADVERTISEMENT

ಬಿಕ್ಕಟ್ಟು ಶಮನಕ್ಕೆ ನಿಷ್ಪಕ್ಷಪಾತ ಪ್ರಯತ್ನ: ಚೀನಾ

ಪಿಟಿಐ
Published 26 ನವೆಂಬರ್ 2020, 15:13 IST
Last Updated 26 ನವೆಂಬರ್ 2020, 15:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌ : ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ಉಂಟಾಗಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸಲು ಭಾರತ ಮತ್ತು ಚೀನಾ ಪರಸ್ಪರ ಸಂವಹನ ಮತ್ತು ಸಮನ್ವಯದ ಜೊತೆಗೆ ನಿಷ್ಪಕ್ಷಪಾತ ಪ್ರಯತ್ನ ನಡೆಸುತ್ತಿವೆ ಎಂದು ಚೀನಾ ಸೇನೆ ಗುರುವಾರ ತಿಳಿಸಿದೆ.

ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಟ್ಟದ ಎಂಟನೇ ಸುತ್ತಿನ ಮಾತುಕತೆ ನಡೆದ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ.

‘ಹಲವು ಸುತ್ತಿನ ಮಾತುಕತೆಗಳ ನಂತರ ಚೀನಾ ಮತ್ತು ಭಾರತದ ನಡುವಿನ ಗಡಿ ಪ್ರದೇಶದ ಪರಿಸ್ಥಿತಿ ಒಟ್ಟಾರೆ ಸ್ಥಿರವಾಗಿದೆ’ ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ADVERTISEMENT

ಉಭಯ ದೇಶಗಳ ನಾಯಕರ ಒಮ್ಮತದ ನಿರ್ಧಾರಗಳನ್ನು ಕಾರ್ಯಗತಗೊಳಿಸಲು, ಮುಂಚೂಣಿಯ ಸೈನಿಕರಲ್ಲಿ ತಪ್ಪು ತಿಳಿವಳಿಕೆ ಮತ್ತು ತಪ್ಪು ಲೆಕ್ಕಾಚಾರಗಳನ್ನು ದೂರಮಾಡಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಸೇನೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾ ಭಾರತದ ಜೊತೆ ಸಂವಹನ ನಡೆಸಲು ಸಿದ್ಧವಾಗಿದೆ. ಭಾರತವೂ ಇದಕ್ಕೆ ಸಹಕರಿಸಲಿದೆ ಎಂಬ ವಿಶ್ವಾಸವಿದೆ. ಪ್ರಾಮಾಣಿಕ ಪ್ರಯತ್ನ ಮತ್ತು ಸಕಾರಾತ್ಮಕ ಪ್ರಕ್ರಿಯೆಗಳಿಂದ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಕಾಪಾಡಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಉಭಯ ಸೇನೆಗಳ ನಡುವಣ ಹಲವು ಸುತ್ತಿನ ಮಾತುಕತೆಯ ಹೊರತಾಗಿಯೂ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿತ್ತು. ಪಾಂಗಾಂಗ್‌ ಸರೋವರ ಹಾಗೂ ಇತರ ಭಾಗಗಳಲ್ಲಿ ಚೀನಾ ಸೇನೆಯು ಯಥಾಸ್ಥಿತಿ ಉಲ್ಲಂಘಿಸುತ್ತಲೇ ಇತ್ತು. ಹೀಗಾಗಿ ಭಾರತೀಯ ಸೇನೆಯು ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 50,000 ಸೈನಿಕರನ್ನು ನಿಯೋಜಿಸಿತ್ತು. ಚೀನಾ ಕೂಡ ತನ್ನ ಗಡಿ ಭಾಗದಲ್ಲಿ ಇಷ್ಟೇ ಸಂಖ್ಯೆಯ ಸೈನಿಕರನ್ನು ಜಮಾವಣೆಗೊಳಿಸಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.