ಬೀರ್ಶೇಬಾ, ಇಸ್ರೇಲ್: ಕಳೆದ ಒಂದು ವಾರದಿಂದ ಪ್ಯಾಲೆಸ್ಟೈನ್ ಉಗ್ರರ ದಾಳಿಯಿಂದ ತೊಂದರೆಗೆ ಸಿಲುಕಿರುವ ಭಾರತೀಯ ಸಂಶೋಧಕರಿಗೆ ದಕ್ಷಿಣ ಇಸ್ರೇಲ್ನ ಬೀರ್ಶೇಬಾ ನಗರದ ಕ್ರಿಕೆಟ್ ಕ್ಲಬ್ವೊಂದು ನೆರವಿನ ಹಸ್ತ ಚಾಚಿದೆ.
ಉಗ್ರರ ದಾಳಿಯಿಂದಾಗಿ ನೆಗೆವ್ ದಕ್ಷಿಣ ವಲಯದ ಬೆನ್ ಗುರಿಯನ್ ವಿಶ್ವವಿದ್ಯಾಲಯದ ಸಂಶೋಧಕರು ಸೂಕ್ತ ಆಶ್ರಯವಿಲ್ಲದೆ ಪರದಾಡುತ್ತಿದ್ದರು. ಇವರಿಗೆ ರಕ್ಷಣೆ ನೀಡಲು ಸ್ಥಳೀಯ ಕ್ರಿಕೆಟ್ ಕ್ಲಬ್ ಮುಂದಾಗಿದೆ.
ಪ್ಯಾಲೆಸ್ಟೈನ್ ಉಗ್ರರು ಉಡಾಯಿಸಿದ ರಾಕೆಟ್ಗಳು ಇಸ್ರೇಲ್ನ ದಕ್ಷಿಣ ಪ್ರದೇಶಗಳ ಮೇಲೆ ಬೀಳಲು ಪ್ರಾರಂಭಿಸಿದ ಕೂಡಲೇ ವಿಶ್ವವಿದ್ಯಾಲಯಕ್ಕೆ ಹತ್ತಿರವಿರುವ ಎರಡು ಅಂತಸ್ತಿನ ಬೀರ್ಶೆಬಾ ಕ್ರಿಕೆಟ್ ಕ್ಲಬ್ ಕಟ್ಟಡವು ಸ್ಥಳೀಯ ನಿವಾಸಿಗಳಿಗೆ ಬಾಗಿಲು ತೆರೆಯಿತು. ತೊಂದರೆಗೀಡಾದ ವೇಳೆ ಸೂಕ್ತ ಆಶ್ರಯಕ್ಕಾಗಿ ಹುಡುಕುತ್ತಿರುವ ವಿಶ್ವವಿದ್ಯಾಲಯದ ಭಾರತೀಯ ಸಂಶೋಧಕರಿಗೂ ಈ ಸಹಾಯವನ್ನು ವಿಸ್ತರಿಸಿತು.
‘ನಮ್ಮ ಕ್ರಿಕೆಟ್ ಕ್ಲಬ್ನಲ್ಲಿ ಭಾರತದ ಕೆಲವು ಸಂಶೋಧಕರೂ ಆಡುತ್ತಾರೆ. ಹೀಗಾಗಿ ಅವರು ನಮ್ಮ ಕುಟುಂಬದ ಭಾಗವಾಗಿದ್ದಾರೆ. ಆಶ್ರಯ ಹುಡುಕಿ ಯಾರೇ ಬಂದರೂ ಅವರನ್ನು ನಾವು ಸ್ವಾಗತಿಸುತ್ತೇವೆ‘ ಎಂದು ಬೀರ್ಶೇಬಾ ಕ್ರಿಕೆಟ್ ಕ್ಲಬ್ನ ಅಧ್ಯಕ್ಷ ನೊವಾರ್ ಗುಡಕರ್ ತಿಳಿಸಿದ್ದಾರೆ.
‘ಯುವಕ ಮತ್ತು ಯುವತಿಯರು ಸೇರಿ ಭಾರತದ ಹಲವು ಸಂಶೋಧಕರು ಕಳೆದ ಒಂದು ವಾರದಿಂದ ಇಲ್ಲಿ ತಂಗಿದ್ದಾರೆ. ಅವರು ಸುರಕ್ಷಿತವಾಗಿರಲು ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ‘ ಎಂದು ನೊವಾರ್ ನುಡಿದರು.
ವಿರಾಜ್ ಭಿಂಗರ್ದಿವೆ, ಹೀನಾ ಖಾಂದ್, ಶಶಾಂಕ್ ಶೇಖರ್, ರುದ್ರಾರು ಸೇನ್ಗುಪ್ತಾ ಮತ್ತು ವಿಷ್ಣು ಖಾಂದ್ ಅವರು ಕ್ರಿಕೆಟ್ ಕ್ಲಬ್ ಕಟ್ಟಡದಲ್ಲಿ ಆಶ್ರಯ ಪಡೆದ ಭಾರತದ ಸಂಶೋಧಕರಲ್ಲಿ ಸೇರಿದ್ದಾರೆ. ಕ್ಲಬ್ಗೆ ಇವರು ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.