ವಾಷಿಂಗ್ಟನ್: ಖಲಿಸ್ತಾನ ಪ್ರತ್ಯೇಕತಾವಾದಿಗಳು ಇಲ್ಲಿನ ಭಾರತೀಯ ದೂತವಾಸ ಕಚೇರಿ ಬಳಿಯ ಮಹಾತ್ಮಗಾಂಧಿ ಪ್ರತಿಮೆಯನ್ನು ಅಪವಿತ್ರಗೊಳಿಸಿರುವುದು ಅಪಾಯಕಾರಿ ಘಟನೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಮೆಕ್ಎನಾನಿ ಬಣ್ಣಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಇದೊಂದು ಭಯಾನಕ ಘಟನೆ. ಯಾವುದೇ ಪ್ರತಿಮೆ ಅಥವಾ ಸ್ಮಾರಕವನ್ನು ವಿರೂಪ ಅಥವಾ ಅಪವಿತ್ರಗೊಳಿಸಬಾರದು. ಗಾಂಧೀಜಿ ಮಾತ್ರವಲ್ಲ, ಅಮೆರಿಕ ಪ್ರತಿಪಾದಿಸುವ ಶಾಂತಿ, ಸೌಹಾರ್ದ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಯಾವುದೇ ವ್ಯಕ್ತಿಗಳ ಪ್ರತಿಮೆಗಳನ್ನು ಅಗೌರವಿಸಬಾರದು‘ ಎಂದರು.
ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲವಾಗಿ ಅಮೆರಿಕನ್–ಸಿಖ್ ಯುವಕರು ಕರೆ ನೀಡಿದ್ದ ಪ್ರತಿಭಟನೆ ವೇಳೆ ಕೆಲವು ಖಲಿಸ್ತಾನ ಪ್ರತ್ಯೇಕತಾವಾದಿಗಳು ಭಾರತೀಯ ದೂತವಾಸ ಕಚೇರಿ ಬಳಿಯ ಗಾಂಧಿ ಪುತ್ಥಳಿಗೆ ಪೋಸ್ಟರ್ ಹಚ್ಚಿ ಅಪವಿತ್ರಗೊಳಿಸಿದ್ದರು.
‘ಹಲವು ಬಾರಿ ಇಂಥ ಘಟನೆಗಳು ಸಂಭಿಸಿದ್ದು, ಇದು ಬಹಳ ಭಯ ಹುಟ್ಟಿಸುವಂತಹದ್ದು‘ ಎಂದು ಹೇಳಿದ ಅವರು, ‘ನಾವು ಮಹಾತ್ಮ ಗಾಂಧೀಜಿ ಅವರನ್ನು ಎಂದೆಂದೂ ಗೌರವಿಸುತ್ತೇವೆ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.