ಕೊಲಂಬೊ (ಎಎಫ್ಪಿ): ಬೌದ್ಧ ಧಾರ್ಮಿಕ ಮೆರವಣಿಗೆಯಲ್ಲಿ ಕೃಶಗೊಂಡಿದ್ದ ಆನೆ ಬಳಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಶ್ರೀಲಂಕಾ ಸರ್ಕಾರ ಶುಕ್ರವಾರ ಆದೇಶ ನೀಡಿದೆ.
70 ವರ್ಷದ ‘ಟಿಕಿರಿ’ ಎಂಬ ಆನೆ ನಿಶ್ಶಕ್ತಗೊಂಡಿತ್ತು. ಆರೋಗ್ಯ ಸರಿಯಿಲ್ಲದಿದ್ದರೂ ಈ ಆನೆಯನ್ನು ಕ್ಯಾಂಡಿ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಬಳಸಲಾಗಿತ್ತು. ಈ ಕುರಿತು ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಆಯಾಸದಿಂದ ಬಳಲಿದ್ದ ಆನೆ ಗುರು
ವಾರ ಮೃತಪಟ್ಟಿದೆ. ಆಯೋಜಕರು ಮೆರವಣಿಗೆಯಲ್ಲಿ ಭಾರದ ವಸ್ತುಗಳಿಂದ ಆನೆಯನ್ನು ಅಲಂಕರಿಸಿದ್ದರು. ಅಲ್ಲದೆ, ಕ್ರೂರವಾಗಿ ನಡೆಸಿಕೊಂಡಿದ್ದರು. ಹೀಗಾಗಿಯೇ ಸಾವು ಸಂಭವಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಸೂಚಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ವನ್ಯಜೀವಿ ಸಚಿವ ಜಾನ್ ಅಮರತುಂಗ ತಿಳಿಸಿದ್ದಾರೆ.
ಟಿಕಿರಿ ಆನೆ ‘ಬೌದ್ಧ ವಿಹಾರಕ್ಕೆ’ ಸೇರಿಲ್ಲ ಎಂದಿರುವ ಅಧಿಕಾರಿಗಳು ಆರೋಪ ನಿರಾಕರಿಸಿದ್ದಾರೆ. ಉತ್ಸವದ ಅಂತಿಮ ದಿನ ಈ ಆನೆಯನ್ನು ಬಳಸಿಕೊಂಡಿಲ್ಲ ಎಂದೂ ಹೇಳಿದ್ದಾರೆ.
ಬುದ್ಧನ ಹಲ್ಲು ಇರುವ ಈ ಬೌದ್ಧ ವಿಹಾರದಲ್ಲಿ‘ಇಸಲ’ ಹಬ್ಬದ ಪ್ರಯುಕ್ತ ಪ್ರತಿ ವರ್ಷಜಂಬೂ ಸವಾರಿಯನ್ನು ಆಯೋಜಿಸಲಾಗುತ್ತದೆ. ಮೆರವಣಿಗೆಯಲ್ಲಿ ನೂರಾರು ಆನೆಗಳು ಪಾಲ್ಗೊಳ್ಳುತ್ತವೆ. ವಿಹಾರದಲ್ಲಿ 200ಕ್ಕೂ ಹೆಚ್ಚು ಆನೆಗಳಿದ್ದು, ಇವನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ಆಹಾರವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಪ್ರಾಣಿ ಪ್ರಿಯರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.