ಮಾಧವ ಕುಮಾರ್ ನೇಪಾಳ
ಕಠ್ಮಂಡು: ಜಮೀನು ದುರ್ಬಳಕೆ ಆರೋಪದಡಿ ನೇಪಾಳದ ಮಾಜಿ ಪ್ರಧಾನಿ, ಪಿಪಿಎನ್–ಯುನಿಫೈಡ್ ಸೋಷಿಯಲಿಸ್ಟ್ ಅಧ್ಯಕ್ಷ, ಮಾಧವ ಕುಮಾರ್ ನೇಪಾಳ ವಿರುದ್ಧ ಅಲ್ಲಿನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಆರೋಪಪಟ್ಟಿ ದಾಖಲಿಸಿದೆ.
ಅಧಿಕಾರ ದುರ್ಬಳಕೆ ವಿರುದ್ಧದ ತನಿಖಾ ಸಮಿತಿಯು (ಸಿಐಎಎ) ಮಾಧವ ಕುಮಾರ್ ನೇಪಾಳ ಸೇರಿ 92 ಆರೋಪಿಗಳ ವಿರುದ್ಧ ಪತಂಜಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿತ್ತು.
ಮಾಧವ ನೇಪಾಳ ನೇತೃತ್ವದ ಸರ್ಕಾರದ ಅವಧಿಯಲ್ಲಿ 2010ರಲ್ಲಿ ಪತಂಜಲಿ ಸಂಸ್ಥೆಯು, ಸಂಪುಟದ ಒಪ್ಪಿಗೆ ಪಡೆದು ಕಾವರೆಪಾಲಂಚೋಕ್ ಜಿಲ್ಲೆಯಲ್ಲಿ ಜಮೀನು ಖರೀದಿಸಿತ್ತು. ಈ ಖರೀದಿ ಪ್ರಕ್ರಿಯೆಯಲ್ಲಿ ಭೂ ಒಡೆತನದ ಮಿತಿಯಿಂದ ವಿನಾಯಿತಿ ನೀಡಲಾಗಿತ್ತು. ಸರ್ಕಾರದಿಂದ ರಿಯಾಯಿತಿ ಪಡೆದು ಖರೀದಿಸಿದ ಜಮೀನನ್ನು ನಂತರ ಮಾರಾಟ ಮಾಡಲಾಗಿತ್ತು ಎಂದು ಸಿಐಎಎ ಆರೋಪಿಸಿತ್ತು.
ನೇಪಾಳದ ಮಾಜಿ ಕಾನೂನು ಸಚಿವ ಪ್ರೇಮ್ ಬಹದ್ದೂರ್ ಸಿಂಗ್, ಮಾಜಿ ಭೂ ಸುಧಾರಣಾ ಸಚಿವ ದಂಬರ್ ಶ್ರೇಷ್ಠಾ, ಮಾಜಿ ಮುಖ್ಯ ಕಾರ್ಯದರ್ಶಿ ಮಾಧವ ಪ್ರಸಾದ್ ಗಿಮಿರೆ ಸೇರಿ 90ಕ್ಕೂಹೆಚ್ಚು ವ್ಯಕ್ತಿಗಳ ವಿರುದ್ಧ ಸಿಐಎಎ ಮೊಕದ್ದಮೆ ದಾಖಲಿಸಿತ್ತು. ಆರೋಪಪಟ್ಟಿ ಸಲ್ಲಿಕೆಯಾದ ಬೆನ್ನಲ್ಲೇ, ಮಾಧವ ಕುಮಾರ್ ಅವರು ತಮ್ಮ ಸಂಸದೀಯ ಸ್ಥಾನ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.