ನವದೆಹಲಿ:ಭಯೋತ್ಪಾದಕ ಗುಂಪುಗಳು ಕೋವಿಡ್ ಪಿಡುಗಿನ ಈ ಸಂದರ್ಭವನ್ನು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಮತ್ತು ಹಣ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿವೆ. ನಿರ್ಬಂಧಗಳ ಈ ಸಮಯದಲ್ಲಿ ಸುದ್ದಿಯಿಂದ ದೂರವೇ ಇರುವ ಉಗ್ರಗಾಮಿ ಸಂಘಟನೆ
ಗಳಿಗೆ ಪ್ರಸ್ತುತತೆ ಕಳೆದುಕೊಳ್ಳುವ ಆತಂಕವೂ ಇದೆ. ಹಾಗಾಗಿ, ನಿರ್ಬಂಧಗಳು ಸಡಿಲಿಕೆಯಾದ ಬಳಿಕ ದಾಳಿ ನಡೆಸುವ ಅಪಾಯ ಇದೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ಹೇಳಿದೆ.
ಕೋವಿಡ್–19 ನಂತರ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ. ಕೊರೊನಾದಿಂದ ಮುಕ್ತರಾದ ನಂತರ ಅಂತರರಾಷ್ಟ್ರೀಯ ಸಮುದಾಯಕ್ಕೆ ಭಯೋತ್ಪಾದನೆಯ ದಾಳಿಗಳ ಹೊಸ ಸವಾಲುಗಳು ಎದುರಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆಯು ಲಾಕ್ಡೌನ್ ಸಮಯದಲ್ಲಿ ವಿವಿಧ ದೇಶಗಳಲ್ಲಿ ಒಂದಷ್ಟು ಜನರನ್ನು ಸೇರಿಸಿಕೊಂಡಿದೆ. ದಾಳಿಯ ಯೋಜನೆ ಮತ್ತು ಜಾರಿಗೆ ಈ ಜನರನ್ನು ಐಎಸ್ ಬಳಸಿಕೊಂಡರೆ, ದಾಳಿಗಳ ಸಂಖ್ಯೆ ಹೆಚ್ಚಬಹುದು ಎಂಬ ಆತಂಕವನ್ನೂ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.
ಐಎಸ್ನ ಪ್ರಚಾರ ಮತ್ತು ಮಾಧ್ಯಮ ವಿಭಾಗಕ್ಕೆ ಕೋವಿಡ್ನಿಂದ ದೊಡ್ಡ ಸಮಸ್ಯೆ ಎದುರಾಗಿಲ್ಲ. ‘ಶತ್ರುವು ದುರ್ಬಲ
ವಾಗಿರುವಾಗಲೇ ದಾಳಿ ನಡೆಸಬೇಕು’. ‘ಕೋವಿಡ್ ಪಿಡುಗು ಪಶ್ಚಿಮದದೇಶಗಳ ಪಾಲಿನ ದೈವಿಕ ಶಿಕ್ಷೆ. ಹಾಗಾಗಿ, ಕೋವಿಡ್ ಸಂಭ್ರಮದ ವಿಚಾರ’ ಎಂದು ಐಎಸ್ನ ಮಾಧ್ಯಮ ವಿಭಾಗವು ಕರೆಕೊಟ್ಟಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.