ಕಠ್ಮಂಡು: ಭಾರತ ಮತ್ತು ನೇಪಾಳದಲ್ಲಿರುವ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ಸಂಪರ್ಕಿಸುವ ‘ಭಾರತ್ ಗೌರವ್ ರೈಲು’ ಗುರುವಾರ ನೇಪಾಳದ ಜನಕಪುರಕ್ಕೆ ತಲುಪಿದೆ. ಮಂಗಳವಾರ ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಿಂದ ಈ ರೈಲು ಯಾನ ಆರಂಭವಾಗಿತ್ತು. 14 ಬೋಗಿಗಳ ಈ ವಿಶೇಷ ರೈಲಿನಲ್ಲಿ 500 ಪ್ರವಾಸಿಗರು ಇದ್ದರು.
ಈ ವೇಳೆ ಮದೇಶ್ ಪ್ರದೇಶದ ಮುಖ್ಯಮಂತ್ರಿ ಲಾಲ್ಬಾಬು ರಾವುತ್, ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಅರಣ್ಯ ಸಚಿವ ಶುತ್ರಘನ್ ಮಹತೊ, ಜನಕಪುರಧಾಮ್ ಮೇಯರ್ ಮನೋಜ್ ಕುಮಾರ್ ಶಾ, ನೇಪಾಳ ರೈಲ್ವೆ ಪ್ರಧಾನ ವ್ಯವಸ್ಥಾಪಕ ನಿರಂಜನ್ ಝಾ, ಕಠ್ಮುಂಡುವಿನಲ್ಲಿರುವ ಭಾರತದ ರಾಯಭಾರಿ ಪ್ರಸನ್ನ ಶ್ರೀವಾಸ್ತವ ಅವರು ಪ್ರವಾಸಿಗರನ್ನು ಆತ್ಮೀಯವಾಗಿಬರಮಾಡಿಕೊಂಡರು.
ಈ ಪ್ರವಾಸಿಗರು ಜಾನಕಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲಿದ್ದಾರೆ. ಬಳಿಕ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ.
ರಾಮಾಯಣ ಸರ್ಕ್ಯೂಟ್ ಅಭಿವೃದ್ಧಿ ಮತ್ತು ಶ್ರೀರಾಮ ಹಾಗೂ ಸೀತೆಗೆ ಸಂಬಂಧಿಸಿದ ಮುಖ್ಯ ಸ್ಥಳಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಈ ರೈಲು ಸೇವೆ ಆರಂಭಿಸಿತ್ತು. ರಾಮಾಯಣಕ್ಕೆ ಸಂಬಂಧಿಸಿದ ಅಯೋಧ್ಯೆ, ನಂದಿಗ್ರಾಮ, ವಾರಾಣಸಿ, ಪ್ರಯಾಗ್ರಾಜ್, ಚಿತ್ರಕೂಟ, ಪಂಚವತಿ, ಕರ್ನಾಟಕದ ಹಂಪಿ ಸೇರಿದಂತೆ ಹಲವು ಯಾತ್ರಿಕರ ಸ್ಥಳಗಳಿಗೆ ತೆರಳುವ ಈ ರೈಲು ಇದೇ ಮೊದಲ ಬಾರಿಗೆ ನೇಪಾಳದ ಜನಕಪುರಕ್ಕೆ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.