ಕಠ್ಮಂಡು: ಎರಡು ದಿನಗಳ ನೇಪಾಳ ಭೇಟಿಗಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಗುರುವಾರ ಇಲ್ಲಿಗೆ ಬಂದಿದ್ದಾರೆ.
ಈ ಎರಡು ದಿನಗಳ ಭೇಟಿಯಲ್ಲಿ ನೇಪಾಳದ ವಿದೇಶಾಂಗ ಕಾರ್ಯದರ್ಶಿ ಭಾರತ್ ರಾಜ್ ಪೌಡಿಯಲ್ ಅವರೊಂದಿಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಹಕಾರ ಕುರಿತು ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ಗಡಿ ರೇಖೆಯಲ್ಲಿ ಉಂಟಾಗಿರುವ ಸಮಸ್ಯೆಯ ಹಿನ್ನೆಲೆಯಲ್ಲಿ ನೇಪಾಳದ ವಿದೇಶಾಂಗ ಕಾರ್ಯದರ್ಶಿ ಅವರ ಆಹ್ವಾನದ ಮೇರೆಗೆ ಶ್ರಿಂಗ್ಲಾ ಇಲ್ಲಿಗೆ ಭೇಟಿ ನೀಡಿದ್ದಾರೆ.
ನೇಪಾಳ ಮತ್ತು ಭಾರತದ ನಡುವೆ ವಿವಿಧ ಕ್ಷೇತ್ರಗಳಲ್ಲಿನ ಸಹಕಾರ ಕುರಿತು ಚರ್ಚಿಸಲಾಗುವುದು. ಶ್ರಿಂಗ್ಲಾ ಅವರು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿಯನ್ನೂ ಭೇಟಿ ಮಾಡಲಿದ್ದಾರೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಶ್ರೀಂಗ್ಲಾ ಅವರು ಇಂದು (ಗುರುವಾರ) ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತು ಅಧ್ಯಕ್ಷ ವಿದ್ಯಾದೇವಿ ಭಂಡಾರಿ ಅವರನ್ನು ಭೇಟಿ ಮಾಡಲಿದ್ದಾರೆ. ಶುಕ್ರವಾರ ಕಠ್ಮಂಡುವಿನಲ್ಲಿ ಉಪನ್ಯಾಸ ನೀಡಲಿದ್ದು, 2015ರ ಭೂಕಂಪದ ಕೇಂದ್ರ ಬಿಂದುವಾಗಿದ್ದ ಗೂರ್ಖಾದಲ್ಲಿ ಭಾರತೀಯ ನೆರವಿನಡಿಯಲ್ಲಿ ನಿರ್ಮಿಸಲಾದ ಮೂರು ಶಾಲೆಗಳನ್ನು ಪರಿಶೀಲಿಸಲಿದ್ದಾರೆ ಎಂದು ನೇಪಾಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.