ಜಿನಿವಾ : ಭೂಮಿಯ ತಾಪಮಾನ ವಿಪರೀತ ಹೆಚ್ಚಾಗುತ್ತಿದೆ. ಇನ್ನು ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಮಿತಿಮೀರಿ ಹೋಗಲಿದೆ ಎಂದು ವಿಶ್ವಸಂಸ್ಥೆ ವರದಿ ಎಚ್ಚರಿಕೆ ನೀಡಿದೆ.
ವಿಶ್ವದ ನಾಯಕರು ತಾಪಮಾನ ತಡೆಯುವ ನಿಟ್ಟಿನಲ್ಲಿ ಪ್ರಯತ್ನಕ್ಕೆ ಮುಂದಾಗಬೇಕು. ಇಲ್ಲದೇ ಹೋದಲ್ಲಿ, ‘ಓಡಿಹೋಗಲು ಬೇರೆ ಸ್ಥಳವಿಲ್ಲ; ಅಡಗಲು ಸುರಕ್ಷಿತ ತಾಣವಿಲ್ಲ’ ಎಂದು ವರದಿ ಎಚ್ಚರಿಸಿದೆ.
‘ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹದಗೆಡುವುದು ಖಚಿತ’ ಎಂದು ವರದಿಯ ಸಹ–ಲೇಖಕಿಯಾಗಿರುವ ಅಮೆರಿಕದ ರಾಷ್ಟ್ರೀಯ ಹವಾಮಾನ ಸಂಶೋಧನಾ ಕೇಂದ್ರದ ವಿಜ್ಞಾನಿ ಲಿಂಡಾ ಮಿರ್ನಸ್ ತಿಳಿಸಿದ್ದಾರೆ.
ಮೂರು ಸಾವಿರಕ್ಕೂ ಹೆಚ್ಚು ಪುಟಗಳ ಈ ವರದಿಯನ್ನು 234 ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ತಾಪಮಾನದಿಂದ ಸಮುದ್ರಮಟ್ಟವು ಹೆಚ್ಚಾಗಿದ್ದು, ಬಿಸಿಗಾಳಿ, ಬರ, ಪ್ರವಾಹ ಮತ್ತು ಚಂಡಮಾರುತದಂತಹ ಭೀಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉದಾಹರಣೆಗೆ, ಪ್ರತಿ 50 ವರ್ಷಗಳಿಗೊಮ್ಮೆ ಬಿಸಿಗಾಳಿಯ ವಾತಾವರಣ ಸೃಷ್ಟಿಯಾಗುತ್ತಿತ್ತು. ಆದರೆ, ಈಗ ಒಂದು ದಶಕದಲ್ಲೇ ಈ ರೀತಿಯ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತೊಂದು ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾದರೆ ಪ್ರತಿ ಏಳು ವರ್ಷಗಳಲ್ಲಿ ಎರಡು ಬಾರಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
2030ರ ವೇಳೆಗೆ ಮತ್ತೆ 1.5 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಇದು ನಿರೀಕ್ಷೆಗಿಂತಲೂ ಹೆಚ್ಚು ಎಂದು ತಿಳಿಸಿದೆ.
ಹವಾಮಾನ ಬದಲಾವಣೆ ಪರಿಣಾಮ ಭಾರತವು ಬಿಸಿಗಾಳಿ, ಬರಪರಿಸ್ಥಿತಿ ಮತ್ತು ಪ್ರವಾಹಕ್ಕೆ ಸಾಕ್ಷಿಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.