ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದ್ದು, ಭಯೋತ್ಪಾದಕ ಸಂಘಟನೆ ಜಮಾತ್–ಇ–ಇಸ್ಲಾಂ ಬೆಂಬಲಿತ ವಿರೋಧ ಪಕ್ಷಗಳ ನಾಯಕರು ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಶೇಖ್ ಹಸೀನಾ ನೇತೃತ್ವದ ಸರ್ಕಾರಕ್ಕೆ ಕಳಂಕ ಹಚ್ಚಲು ಯತ್ನಿಸುತ್ತಿದ್ದಾರೆ.
ಉಗ್ರಗಾಮಿ ಸಂಘಟನೆ ಜಮಾತ್–ಇ–ಇಸ್ಲಾಂನ ಬೆಂಬಲದೊಂದಿಗೆ, ಸರ್ಕಾರವನ್ನು ಉರುಳಿಸುವ ವಿರೋಧ ಪಕ್ಷಗಳ ಪ್ರಯತ್ನದಲ್ಲಿ ನೂರುಲ್ ಹಕ್ ನೂರ್ ಮುಂಚೂಣಿಯಲ್ಲಿದ್ದು, ಅವರು ಮತ್ತು ಅವರ ಸಹಚರರು ಶೇಖ್ ಹಸೀನಾ ನೇತೃತ್ವದ ಸರ್ಕಾರದ ಜಾತ್ಯತೀತ ನಿಲುವಿಗೆ ವಿರೋಧ ಹೊಂದಿದ್ದಾರೆ. ಹೀಗಾಗಿ, ಹಿಂದೂಗಳು ಮತ್ತು ಭಾರತದ ವಿರುದ್ಧ ದೂಷಣೆಗಳ ಸುರಿಮಳೆಗೈಯ್ಯುತ್ತಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
‘ಹಿಂದೂ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಯನ್ನು ಮಾಡುವುದಿಲ್ಲ. ಅವು ಅಶ್ಲೀಲ ಬರಹಗಳು’ ಎಂದು ಬಾಂಗ್ಲಾದೇಶದ ಗೋನೊ ಅಧಿಕಾರ್ ಪರಿಷತ್ನ ಜಂಟಿ ಸಂಚಾಲಕ ಮತ್ತು ನೂರುಲ್ ಹಕ್ ನೂರ್ ಅವರ ಆಪ್ತ ತಾರಿಕ್ ರೆಹಮಾನ್ ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದು, ಹಿಂದೂ ಧರ್ಮದ ಬಗ್ಗೆ ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊವನ್ನು ಫೇಸ್ಬುಕ್ನಲ್ಲಿ ಹಲವು ಜಾಲತಾಣಿಗರು ಹಂಚಿಕೊಂಡಿದ್ದು, 1971ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ ಬಾಂಗ್ಲಾದೇಶ ಪ್ರತ್ಯೇಕ ದೇಶದ ಹುಟ್ಟನ್ನು ವಿರೋಧಿಸಿ ಹಿಂದೂಗಳನ್ನು ಹೊರ ಹಾಕಿ ಎಂದು ಜಮಾತ್ ಮೊಳಗಿಸಿದ್ದ ಘೊಷಣೆಗೆ ಹೋಲಿಕೆ ಮಾಡಿದ್ಧಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.