ವಿಶ್ವಸಂಸ್ಥೆ: ಭಯೋತ್ಪಾದನೆ ನಿಗ್ರಹ, ಹವಾಮಾನ ವೈಪರೀತ್ಯ ತಡೆಗೆ ಕ್ರಮ, ಸುಸ್ಥಿರ ಅಭಿವೃದ್ಧಿ ಹೀಗೆ ಹಲವು ವಿಚಾರಗಳಲ್ಲಿ ಭಾರತ ಪ್ರಸಕ್ತ ವರ್ಷ ವಿಶ್ವಸಂಸ್ಥೆಯಲ್ಲಿ ಮುಂಚೂಣಿಯಲ್ಲಿತ್ತು.
ಜಾಗತಿಕ ಉಗ್ರರ ಪಟ್ಟಿಗೆ ಪಾಕಿಸ್ತಾನ ಮೂಲದ ಜೈಶ್–ಎ–ಮೊಹಮ್ಮದ್(ಜೆಇಎಂ) ಉಗ್ರಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೆಸರು ಸೇರ್ಪಡೆಗೆ, ದಶಕಗಳಿಂದ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಆಗ್ರಹಿಸುತ್ತಿತ್ತು. 2019ರಲ್ಲಿ ಈ ಪ್ರಯತ್ನಕ್ಕೆ ಫಲ ದೊರಕಿತ್ತು. ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ಉಗ್ರರ ದಾಳಿ ಬಳಿಕ, ಜೆಇಎಂ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲೂ ಖಂಡನೆ ವ್ಯಕ್ತವಾಗಿತ್ತು.
15 ರಾಷ್ಟ್ರಗಳಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮೊದಲ ಬಾರಿಗೆ ಈ ದಾಳಿ ಕುರಿತು ಪ್ರಕಟಣೆ ಹೊರಡಿಸಿ, ಹೇಯ ಕೃತ್ಯದ ಕುರಿತು ಆಕ್ರೋಶ, ಖಂಡನೆ ವ್ಯಕ್ತಪಡಿಸಿತ್ತು. ಘಟನೆ ನಡೆದ ಎರಡೇ ತಿಂಗಳಲ್ಲಿ ಮಂಡಳಿಯು ಅಜರ್ನನ್ನು ಕಪ್ಪುಪಟ್ಟಿಗೆ ಸೇರಿಸಿತು. ‘ಹಲವು ವರ್ಷಗಳ ಪ್ರಯತ್ನಕ್ಕೆ 2019ರಲ್ಲಿ ಫಲ ದೊರಕಿತ್ತು. ಮಸೂದ್ ಅಜರ್ನನ್ನು ಉಗ್ರರ ಪಟ್ಟಿಗೆ ಸೇರಿಸುವಲ್ಲಿ ನಾವು ಯಶಸ್ವಿಯಾದೆವು. ಹಫೀಜ್ ಸಯೀದ್ ಹೆಸರನ್ನು ಉಗ್ರರ ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನವನ್ನು ನಾವು ತಡೆದೆವು’ ಎಂದು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ತಿಳಿಸಿದರು.
2021–22ರ ಭದ್ರತಾ ಮಂಡಳಿಗೆ ಐದು ತಾತ್ಕಾಲಿಕ ಸದಸ್ಯರ ಹುದ್ದೆಗೆ ಜೂನ್ನಲ್ಲಿ ಚುನಾವಣೆ ನಡೆಯಲಿದ್ದು, ಇದರಲ್ಲಿ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಭಾರತ ಮತ್ತೊಮ್ಮೆ ಪ್ರಬಲ ರಾಷ್ಟ್ರವಾಗಿ ಗುರುತಿಸಿಕೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.