ಜೊಹಾನ್ಸ್ಬರ್ಗ್: ಕೋವಿಡ್-19 ಲಾಕ್ಡೌನ್ನಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ನೆರೆ ರಾಷ್ಟ್ರ ಕಿಂಗ್ಡಂ ಆಫ್ ಲೆಸೊಥೊದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವುದಾಗಿ ಸರ್ಕಾರ ಹೇಳಿದೆ.
ವಂದೇ ಭಾರತ್ ಮಿಷನ್ನ ಮೂರನೇ ಹಂತದಲ್ಲಿ ದಕ್ಷಿಣ ಆಫ್ರಿಕಾ ಸರ್ಕಾರದ ಅನುಮತಿ ಪಡೆದ ನಂತರ ಏರ್ ಇಂಡಿಯಾ ವಿಮಾನವು ಜೂನ್ 18ರಂದು ಜೊಹಾನ್ಸ್ಬರ್ಗ್ನಿಂದ ದೆಹಲಿ ಮತ್ತು ಮುಂಬೈಗೆ ಸಂಚಾರ ನಡೆಸಲಿದೆ ಎಂದು ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.
ವಂದೇ ಭಾರತ್ ಮಿಷನ್ನಡಿಯಲ್ಲಿ ವಿವಿಧ ದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಕರೆತರಲಾಗಿತ್ತು.ಹೀಗೆ ವಾಪಸ್ ಆಗುವ ಭಾರತೀಯರು ವಿಮಾನ ಟಿಕೆಟ್ ಹಣ ಪಾವತಿ ಮಾಡಬೇಕು . ಆದಾಗ್ಯೂ, ವಿಮಾನ ದರ ಇನ್ನೂ ನಿಗದಿ ಆಗಿಲ್ಲ.
ತುರ್ತು ಸಂದರ್ಭದಲ್ಲಿ ತಾಯ್ನಾಡಿಗೆ ಮರಳಬೇಕಾಗಿರುವವರಿಗೆ, ವಲಸೆ ಕಾರ್ಮಿಕರಿಗೆ, ಕೆಲಸ ಕಳೆದುಕೊಂಡವರಿಗೆ, ವೀಸಾ ಅವಧಿ ಮುಗಿದವರಿಗೆ, ಗರ್ಭಿಣಿಯರು ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ ನೀಡಲಾಗುವುದು.
ರೋಗ ಲಕ್ಷಣಗಳು ಇಲ್ಲದೇ ಇರುವ ಪ್ರಯಾಣಿಕರನ್ನು ಮಾತ್ರ ಕರೆತರಲಾಗುವುದು. ಭಾರತಕ್ಕೆ ಮರಳಿದ ನಂತರ ದೆಹಲಿ, ದೆಹಲಿ ಎನ್ಸಿಆರ್, ಹರಿಯಾಣ, ಭಿವಾಡಿ ಅಥವಾ ಛತ್ತೀಸ್ಗಡದಲ್ಲಿ ಅವರದ್ದೇ ಖರ್ಚಿನಲ್ಲಿ 7 ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕು. ಇದಾದನಂತರ 7 ದಿನ ಮನೆಯಲ್ಲೇ ಐಸೋಲೇಷನ್ನಲ್ಲಿರಬೇಕು.
ಮೇ.25ರಿಂದ ಭಾರತದಲ್ಲಿ ದೇಶೀಯ ವಿಮಾನ ಹಾರಾಟ ಆರಂಭ ಆಗಿದೆ. ಆದರೆ ವಿದೇಶದಿಂದ ಬಂದವರು ದೆಹಲಿ ಅಥವಾ ಮುಂಬೈನಲ್ಲಿ ಕಡ್ಡಾಯ ಕ್ವಾರಂಟೈನ್ ಅವಧಿ ಮುಗಿಸದೆ ದೇಶೀಯ ವಿಮಾನಗಳಲ್ಲಿ ಪ್ರಯಾಣ ನಡೆಸುವಂತಿಲ್ಲ. ಭಾರತಕ್ಕೆ ತಲುಪಿದರೆ ಆರೋಗ್ಯ ಸೇತು ಬಳಕೆ ಕಡ್ಡಾಯ ಎಂದು ಭಾರತೀಯ ಹೈಕಮಿಷನ್ ಹೇಳಿದೆ.
ಕಳೆದ ತಿಂಗಳಲ್ಲಿ ಸುಮಾರು 150 ಭಾರತೀಯರನ್ನು ದಕ್ಷಿಣ ಆಫ್ರಿಕಾದಿಂದ ಕರೆತರಲಾಗಿತ್ತು. ಹೀಗೆ ಬರುವ ಪ್ರಯಾಣಿಕರು ವಿಮಾನ ದರ ಅಂದಾಜು 65,393ರಷ್ಟು ಪಾವತಿ ಮಾಡಬೇಕಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.