ಸಿಂಗಪುರ: ‘ಸೈಬರ್ ಬೆದರಿಕೆಯನ್ನು ಭವಿಷ್ಯದಲ್ಲಿ ಪರಿಣಾಮಕಾರಿಯಾಗಿ ಎದುರಿಸಲು ಭಾರತ ಸರ್ಕಾರ, ಶಿಕ್ಷಣ ಕ್ಷೇತ್ರದ ವಾರ್ಷಿಕ ಆಯವ್ಯಯದ ಶೇ 50ರಷ್ಟನ್ನು ಎಂಜಿನಿಯರ್ಗಳ ಕೌಶಲ ಹೆಚ್ಚಿಸಲು ವ್ಯಯಿಸಬೇಕಿದೆ’ ಎಂದು ಉದ್ಯಮದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ, ದೇಶದಲ್ಲಿ ಡಿಜಿಟಲೀಕರಣ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಆದ್ಯತೆ ಮೇರೆಗೆ ಮೊದಲಿಗೆ ಸೈಬರ್ ಭದ್ರತೆ ಕುರಿತು ದೊಡ್ಡ ಮತ್ತು ಸಣ್ಣ ಉದ್ದಿಮೆ ಒಳಗೊಂಡಂತೆ ದೇಶದಾದ್ಯಂತ ಜಾಗೃತಿ ಮೂಡಿಸಬೇಕಿದೆ ಎಂದು ಸೌತ್ ಈಸ್ಟ್ ಏಷ್ಯಾದ ಉಪಾಧ್ಯಕ್ಷ ನಿಲೇಶ್ ಜೈನ್ ಹೇಳಿದರು.
‘ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಎಂಜಿನಿಯರ್ಗಳು ರೂಪುತಳೆಯುತ್ತಿದ್ದಾರೆ. ಅದರೆ, ಇವರಿಗೆ ಸೈಬರ್ ಬೆದರಿಕೆ ನಿರ್ವಹಿಸುವ ತರಬೇತಿ ಇರುವುದಿಲ್ಲ. ಈ ಕುರಿತು ಗಮನಹರಿಸಲು ಇದು ಸಕಾಲ’ ಎಂದುಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡಿದ ಅವರು ಹೇಳಿದರು.
ಪ್ರಸ್ತುತ ಆರ್ಥಿಕತೆಯ ಭಿನ್ನ ಕ್ಷೇತ್ರಗಳಲ್ಲಿ ಸೈಬರ್ ವಂಚನೆಗಳು ಹೆಚ್ಚುತ್ತಿವೆ. ಹೀಗಾಗಿ, ವಿಶ್ವವಿದ್ಯಾಲಯಗಳು ಈಗ ಸೈಬರ್ ಭದ್ರತಾ ಎಂಜಿನಿಯರ್ಗಳನ್ನು ರೂಪಿಸುವತ್ತ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
ಸೈಬರ್ ಬೆದರಿಕೆ ತೀವ್ರವಾಗಿರುವ ಉನ್ನತ 10 ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಅಮೆರಿಕ ಮತ್ತು ಕೆಲ ಪಶ್ಚಿಮ ರಾಷ್ಟ್ರಗಳನ್ನು ಹೊರತುಪಡಿಸಿದರೆ ವೈರಸ್ ದಾಳಿ ಹೆಚ್ಚಿರುವ ಮೊದಲ ಐದು ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.